ಈಗಿನ ಪೋಷಕರಿಗೆ ಮಕ್ಕಳು ಆಕ್ಷಿ ಎಂದರೂ ಭಯವಾಗುತ್ತದೆ. ಕಣ್ಣು ನಿದ್ದೆಗೆ ಕೆಂಪಾಗಿದ್ದರೂ ವೈದ್ಯರ ಬಳಿ ಓಡಿಹೋಗ್ತಾರೆ. ಇದು ಇವರ ತಪ್ಪು ಅಂತಲ್ಲ. ಎಲ್ಲರೂ ಮೊದಲು ಬಾರಿಗೆ ತಾನೇ ಪೋಷಕರಾಗಿರುತ್ತಾರೆ. ಮಕ್ಕಳ ಪಾದಕ್ಕೆ ಧೂಳೂ ತಾಗದಂತೆ ನೋಡಿಕೊಂಡರೆ ನೀವು ಉತ್ತಮ ಪೋಷಕರೇ ಆದರೆ ಕಾಲಿಗೆ ಮುಳ್ಳು ಚುಚ್ಚದಂತಹ ಚಪ್ಪಲಿ ಕೊಡಿಸೋರು, ಮುಳ್ಳು ಚುಚ್ಚಿದ್ರೂ ಮುಳ್ಳನ್ನು ತೆಗೆಯೋಕೆ ಕಲಿಸುವ ಪೋಷಕರು ಅತ್ಯುತ್ತಮವಾಗಿರುತ್ತಾರೆ.
ಇತ್ತೀಚೆಗೆ ಬಾಲಿವುಡ್ ನಟ ಶಾಹಿದ್ ಕಪೂರ್ ಕೂಡ ಇದನ್ನೇ ಹೇಳಿದ್ದಾರೆ. ಶಾಹಿದ್ಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಅವರಿಬ್ಬರನ್ನು ಜಿಮ್ನಾಸ್ಟಿಕ್ ಕ್ಲಾಸ್ಗೆ ಹಾಕಿದ್ದಾರೆ. ಈ ಬಗ್ಗೆ ಮಾತನಾಡುತ್ತಾ, ಮಕ್ಕಳನ್ನು ಜಿಮ್ನಾಸ್ಟಿಕ್ಸ್ಗೆ ಸೇರಿಸಿದ್ದೀನಿ. ಅಲ್ಲಿ ಹಾರೋದು, ಬೀಳೋದು ಇದ್ದೇ ಇದೆ. ಕೆಳಕ್ಕೆ ಬಿದ್ದರೂ ಮೂಳೆ ಮುರಿದುಹೋಗದಂತೆ, ಗಾಯ ಆಗದಂತೆ ಮ್ಯಾಟ್ ಹಾಕಲಾಗಿರುತ್ತದೆ. ಇನ್ನು ಮಕ್ಕಳ ಮೊಣಕೈ, ಮೊಣಕಾಲಿಗೆ ಸೇಫ್ಟಿ ಪ್ಯಾಡ್ಸ್ ಹಾಕಿರುತ್ತಾರೆ.
ಮಕ್ಕಳು ಬೀಳೋದನ್ನು ತಡೆಯೋಕಾಗೋದಿಲ್ಲ. ತಡೆಯೋದು ಒಳ್ಳೆಯದೂ ಅಲ್ಲ, ಆದರೆ ಬಿದ್ದಾಗ ನೋವಾಗದಂತೆ ನೋಡಿಕೊಳ್ಳೋದು ಪೋಷಕರ ಜವಾಬ್ದಾರಿ. ಮಕ್ಕಳಿಗೆ ಚಾಕು, ಕತ್ತರಿ ಬಗ್ಗೆ ಅತಿಯಾದ ಕ್ಯೂರಿಯಾಸಿಟಿ ಇರುತ್ತದೆ. ನೀವು ಅದನ್ನು ಮುಟ್ಟೋಕೆ ಬಿಡದೇ ಕೈ ಕಟ್ ಆಗುತ್ತೆ ಎಂದರೆ ಅವರು ಕ್ಯಾರೆ ಎನ್ನೋದಿಲ್ಲ. ಇದರ ಬದಲು ಅವರ ಕೈಗೆ ಚಾಕು ಕೊಡಿ. ಕಟ್ ಮಾಡೋದು ಹೇಳಿಕೊಡಿ. ಸೇಫ್ ಆಗಿರೋದು ಹೇಗೆ ಎಂದು ಹೇಳಿಕೊಡಿ…
ಇನ್ನಿತರ ಪೇರೆಂಟಿಂಗ್ ಟಿಪ್ಸ್ ಇಲ್ಲಿದೆ..
ಮಕ್ಕಳನ್ನು ಭಯ ಅಥವಾ ಅತಿಯಾದ ರಕ್ಷಣೆಯಲ್ಲೇ ಇಡುವುದು ಸರಿಯಲ್ಲ. ಬದಲಾಗಿ, ಮಕ್ಕಳಿಗೆ ನೋವಾಗದಂತಹ ತಪ್ಪುಗಳನ್ನು ಮಾಡಲು ಅವಕಾಶ ನೀಡಬೇಕು.
ಮಕ್ಕಳು ತಮ್ಮ ಮಿತಿಗಳನ್ನು ಪರೀಕ್ಷಿಸಲು, ಪರಿಣಾಮಗಳನ್ನು ಎದುರಿಸಲು ಮತ್ತು ತಾವು ಯಾರೆಂದು ಕಂಡುಕೊಳ್ಳಲು ನೀವು ಅವಕಾಶ ನೀಡಬೇಕು. ಈ ಪ್ರಕ್ರಿಯೆಯು ಮನೆಯಲ್ಲಿ, ಪ್ರೀತಿಯಿಂದ ತಿದ್ದುವ ಜನರ ನಡುವೆ ನಡೆದರೆ ಉತ್ತಮ. ಕಠಿಣ ಶಿಕ್ಷೆಗಿಂತ ಕಾಳಜಿಯಿಂದ ತಿದ್ದುವುದು ಮುಖ್ಯ.
ಮಕ್ಕಳಿಗೆ ಒಳ್ಳೆಯ ಮತ್ತು ಕೆಟ್ಟ ನಡವಳಿಕೆ ಯಾವುದು, ಸರಿ ಮತ್ತು ತಪ್ಪು ಯಾವುದು ಎಂದು ಕಲಿಸಬೇಕು. ಮೌಲ್ಯಗಳ ಮಹತ್ವವನ್ನು ತಿಳಿಸಿಕೊಡಿ. ಅವರಲ್ಲಿ ಉತ್ತಮ ಚಾರಿತ್ರ್ಯವನ್ನು ರೂಪಿಸಬೇಕು.
ಶಿಸ್ತು ಎಂಬುದು ಕೇವಲ ನಿಯಮಗಳನ್ನು ಹೇರುವುದಲ್ಲ, ಅದು ನಂಬಿಕೆಯ ಮೇಲೆ ನಿಂತಿರಬೇಕು. ಮಕ್ಕಳು ಮುಜುಗರವಿಲ್ಲದೆ ತಪ್ಪುಗಳನ್ನು ಒಪ್ಪಿಕೊಳ್ಳುವಂತಹ ಮತ್ತು ಸರಿಪಡಿಸಿಕೊಳ್ಳುವಂತಹ ಭದ್ರತೆ ಅವರಿಗೆ ಸಿಗಬೇಕು.
ಮಕ್ಕಳು ಎಂದಿಗೂ ತಪ್ಪು ಮಾಡದಂತೆ ಬೆಳೆಸುವುದು ಪೋಷಕರ ಗುರಿಯಲ್ಲ. ಬದಲಾಗಿ, ತಪ್ಪು ಮಾಡಿದಾಗ ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಮತ್ತು ಚೇತರಿಸಿಕೊಳ್ಳಬೇಕು ಎಂದು ತಿಳಿಯುವಂತೆ ಮಗುವನ್ನು ಬೆಳೆಸುವುದು ಮುಖ್ಯ.



