ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಂಚ ರಾಜ್ಯ ಚುನಾವಣೆ ಫಲಿತಾಂಶ ಬಳಿಕ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ವಿವಿಧ ರಾಜ್ಯಗಳಲ್ಲಿ ಬಹುಮತ ಪಡೆದ ಪಕ್ಷಗಳು ಕಸರತ್ತು ನಡೆಸುತ್ತಿದ್ದು, ಕೇರಳದಲ್ಲೂ ಕೂಡ ಕುರ್ಚಿಗಾಗಿ ಫೈಟ್ ಶುರುವಾಗಿದೆ.
ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ 10 ವರ್ಷದ ಆಡಳಿತ ಅಂತ್ಯಗೊಂಡು ಯುಡಿಎಫ್ ಪಕ್ಷ ಅಧಿಕಾರದ ಗದ್ದುಗೆಗೆ ಏರಲು ರೆಡಿಯಾಗಿದೆ. ಆದರೆ ಎಲ್ಲಾ ರಾಜ್ಯಗಳಂತೆ ಇಲ್ಲೂ ಕೂಡ ಸಿಎಂ ಪಟ್ಟಕ್ಕಾಗಿ ಪೈಪೋಟಿ ಶುರುವಾಗಿದೆ.
ಇತ್ತ ಕಾಂಗ್ರೆಸ್ ಹಿರಿಯ ನಾಯಕ ವಿ.ಡಿ. ಸತೀಸನ್, ಮುಖ್ಯಮಂತ್ರಿ ಸ್ಥಾನ ಕೊಡಿ , ಇಲ್ಲದಿದ್ರೆ ಶಾಸಕನಾಗಿಯೇ ಇರುತ್ತೇನೆ ಎಂದು ಕಾಂಗ್ರೆಸ್ ಹೈಕಮಾಂಡ್ ಗೆ ಸಂದೇಶ ರವಾನಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಬಿಟ್ಟು ಬೇರೆ ಯಾವ ಸಚಿವ ಸ್ಥಾನವು ಬೇಡ. ಈ ಕುರಿತು ಯಾರು ನನ್ನ ಮನವೊಲಿಕೆ ಮಾಡಿದರು ಒಪ್ಪುವುದಿಲ್ಲ ಎಂದು ಹೈಕಮಾಂಡ್ ವೀಕ್ಷಕರಾದ ಅಜಯ್ ಮಾಕನ್ ಮತ್ತು ಮುಕುಲ್ ವಾಸ್ನಿಕ್ ಅವರಿಗೆ ತಿಳಿಸಿದ್ದಾರೆ.
ಸತೀಸನ್ ಗೆ ಯುಡಿಎಫ್ ನ ವಿವಿಧ ಶಾಸಕರ ಜೊತೆ ಮಿತ್ರಪಕ್ಷಗಳು ಬೆಂಬಲ ನೀಡಿವೆ. ಇದರಿಂದ ಕಾಂಗ್ರೆಸ್ ಗೆ ಸಿಎಂ ಆಯ್ಕೆ ದೊಡ್ಡ ತಲೆನೋವು ಪರಿಣಮಿಸಿದೆ.
ಇದರ ನಡುವೆ ಕೆ.ಸಿ ವೇಣುಗೋಪಾಲ್ ಅವರನ್ನು ಸಿಎಂ ಮಾಡಬೇಕೆಂಬ ಒಲವು ಕಾಂಗ್ರೆಸ್ ಹೈ ಕಮಾಂಡ್ ಗೆ ಇದ್ದು, ಅದಕ್ಕೆ ತಕ್ಕಂತೆ ಹೆಚ್ಚಿನ ನಾಯಕತ್ವ ಮತ್ತು ಶಾಸಕರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ. ಹೀಗಾಗಿ ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಕಾದುನೋಡಬೇಕಿದೆ.



