ಹೊಸದಿಗಂತ ವರದಿ ಅಂಕೋಲಾ:
ಕರ್ನಾಟಕ ಪೊಲೀಸ್ ಕಾಯ್ದೆ 1963 ರ ಅಡಿಯಲ್ಲಿ ಈಗಾಗಲೇ 10 ಪ್ರಕರಣಗಳು ದಾಖಲಾಗಿದ್ದರೂ ಕಾನೂನುಬಾಹಿರ ಅಪರಾಧ ಚಟುವಟಿಕೆಗಳನ್ನು ಮುಂದುವರಿಸಿದ ವ್ಯಕ್ತಿಯೊಬ್ಬರಿಗೆ ಆರು ತಿಂಗಳ ಅವಧಿಗೆ ಉತ್ತರ ಕನ್ನಡ ಜಿಲ್ಲೆಯಿಂದ ಕಲಬುರ್ಗಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿದೆ.
ತಾಲೂಕಿನ ಕೇಣಿಯ ಶ್ಯಾಮಸುಂದರ ಜಿ ಬಂಟ(41) ಎನ್ನುವವರು ಗಡಿಪಾರು ಮಾಡಲಾದ ವ್ಯಕ್ತಿಯಾಗಿದ್ದು ಅಂಕೋಲಾ ಪೊಲೀಸ್ ನಿರೀಕ್ಷಕರ ಪ್ರಸ್ತಾವನೆ ಅರ್ಜಿಯ ಮೇರೆಗೆ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರು ವಿಚಾರಣೆ ನಡೆಸಿ ಮತ್ತು ವ್ಯಕ್ತಿಯ ಹಿನ್ನೆಲೆಯನ್ನು ಪರಿಶೀಲಿಸಿ ಗಡಿಪಾರು ಅಗತ್ಯ ಎಂದು ಕಂಡು ಬಂದಿದ್ದರಿಂದ ಗಡಿಪಾರು ಆದೇಶ ಹೊರಡಿಸಿದ್ದಾರೆ.
ಅಂಕೋಲಾ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಶ್ಯಾಮಸುಂದರನನ್ನು ಕಲ್ಬುರ್ಗಿಯ ನಗರ ವ್ಯಾಪ್ತಿಯ ಚೌಕ ಪೊಲೀಸ್ ಠಾಣೆಯ ಠಾಣಾಧಿಕಾರಿಗಳ ಎದುರು ಹಾಜರುಪಡಿಸಿದರು.



