ಹೊಸದಿಗಂತ ವರದಿ ಚಿತ್ರದುರ್ಗ:
ಯೋಜನೆ ಮತ್ತು ಸಾಂಖ್ಯಿಕ ಸಚಿವರು ಹಾಗೂ ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ರವರ ನಿಧನಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗಡೆರವರು ಅತೀವ ಸಂತಾಪ ಸೂಚಿಸಿದ್ದಾರೆ.
ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿದ್ದ ಡಿ.ಸುಧಾಕರ್ ರಾಜಕೀಯದಲ್ಲಿ ಅಪಾರ ಅನುಭವ ಹೊಂದಿದ್ದರು. ಅಲ್ಪಕಾಲದ ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಧರ್ಮಸ್ಥಳದ ಅಪಾರ ಅಭಿಮಾನಿಯೂ ಭಕ್ತರಾಗಿದ್ದರು. ಅನೇಕ ಬಾರಿ ಇಲ್ಲಿಗೆ ಬಂದು ಮಂಜುನಾಥಸ್ವಾಮಿಯ ದರುಶನ ಪಡೆದು ನನ್ನೊಂದಿಗೆ ಚರ್ಚಿಸಿ ಹೋಗುತ್ತಿದ್ದ ಡಿ.ಸುಧಾಕರ್ ಇತ್ತೀಚೆಗೆ ನಮ್ಮ ಆನೆ ಮರಿ ಶಿವಾನಿಯ ಹುಟ್ಟುಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದನ್ನು ಮರೆಯುವಂತಿಲ್ಲ.
ಇದನ್ನೂ ಓದಿ:
ರಾಜ್ಯ ಸರ್ಕಾರ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಪಕ್ಷದ ವರಿಷ್ಟರೊಂದಿಗೆ ಸೌಹಾರ್ಧಯುತ ಸಂಪರ್ಕವಿಟ್ಟುಕೊಂಡಿದ್ದರಲ್ಲದೆ ಎಲ್ಲಾ ಜಾತಿ ಜನಾಂಗದವರ ಪ್ರೀತಿ ವಿಶ್ವಾಸ ಗಳಿಸಿದ್ದರು ಎಂದು ಸ್ಮರಿಸಿದ್ದಾರೆ.
ಧರ್ಮಸ್ಥಳದಲ್ಲಿ ನಡೆದ ಭಗವಾನ್ ಬಾಹುಬಲಿಯ ಮಹಾಮಸ್ತಕಾಭಿಷೇಕದ ಸಮಿತಿ ಸಭೆಗಳಲ್ಲಿ ಭಾಗವಹಿಸಿ ಮಸ್ತಕಾಭಿಷೇಕದ ಯಶಸ್ಸಿಗೆ ಕಾರಣರಾಗಿದ್ದ ಡಿ.ಸುಧಾಕರ್ರವರ ಅಗಲಿಕೆ ಎಲ್ಲರಿಗೂ ನೋವುಂಟಾಗಿದ್ದು, ದುಃಖತಪ್ತ ಕುಟುಂಬಕ್ಕೆ ಶಾಂತಿ ಕರುಣಿಸಲಿ ಎಂದು ಡಿ.ವೀರೇಂದ್ರ ಹೆಗಡೆರವರು ಮಂಜುನಾಥಸ್ವಾಮಿಯಲ್ಲಿ ಪ್ರಾರ್ಥಿಸಿದ್ದಾರೆ.



