ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರ್ ಸಿಬಿ ತಂಡದ ಆಲ್ರೌಂಡರ್ ಕೃನಾಲ್ ಪಾಂಡ್ಯ ಮುಂಬೈ ವಿರುದ್ಧದ ರೋಚಕ ಗೆಲುವಿನ ಬಳಿಕ ತಮ್ಮ ಗಾಯದ ಗುರುತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಗಮನ ಸೆಳೆದಿದ್ದಾರೆ.
“ಕೆಲವು ಗಾಯಗಳು ನಮ್ಮ ಹೋರಾಟದ ನೆನಪು” ಎಂದು ಬರೆದು ಅವರು ಪಂದ್ಯದಲ್ಲಿನ ಕಠಿಣ ಕ್ಷಣಗಳನ್ನು ನೆನಪಿಸಿಕೊಂಡಿದ್ದಾರೆ.
ಮುಂಬೈ ಇಂಡಿಯನ್ಸ್ ವಿರುದ್ಧ 167 ರನ್ ಗುರಿ ಬೆನ್ನತ್ತಿದ ಆರ್ಸಿಬಿ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. ಕೇವಲ 39 ರನ್ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ಕೃನಾಲ್ ಪಾಂಡ್ಯ ಆಸರೆಯಾದರು. ವಿರಾಟ್ ಕೊಹ್ಲಿ ಬೇಗ ಔಟಾದ ಬಳಿಕ ಕ್ರೀಸ್ಗೆ ಬಂದ ಅವರು ಸ್ನಾಯು ಸೆಳೆತ ಮತ್ತು ನೋವಿನ ನಡುವೆಯೂ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು.
ಇದನ್ನೂ ಓದಿ:
46 ಎಸೆತಗಳಲ್ಲಿ 73 ರನ್ ಸಿಡಿಸಿದ ಕೃನಾಲ್ ನಾಲ್ಕು ಬೌಂಡರಿ ಹಾಗೂ ಐದು ಸಿಕ್ಸರ್ ಬಾರಿಸಿ ಪಂದ್ಯವನ್ನು ತಿರುಗಿಸಿದರು. ಈ ವೇಳೆ ದೀಪಕ್ ಚಹರ್ ಎಸೆದ ವೇಗದ ಚೆಂಡು ಹೊಟ್ಟೆಗೆ ಬಡಿದು ಅವರು ಮೈದಾನದಲ್ಲೇ ಕುಸಿದಿದ್ದರು. ಆದರೂ ಚಿಕಿತ್ಸೆ ಪಡೆದು ಮತ್ತೆ ಬ್ಯಾಟಿಂಗ್ ಮುಂದುವರಿಸಿದರು.
ಅವರ ಹೋರಾಟದ ಆಟಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಕೊನೆಯಲ್ಲಿ ಆರ್ಸಿಬಿ ರೋಚಕವಾಗಿ ಪಂದ್ಯ ಗೆದ್ದು ಮಹತ್ವದ ಎರಡು ಅಂಕಗಳನ್ನು ತನ್ನದಾಗಿಸಿಕೊಂಡಿತು.



