ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡಿನಲ್ಲಿ ಟಿವಿಕೆ ಮುಖ್ಯಸ್ಥ ವಿಜಯ್ ಗೆಲುವು ಸಾಧಿಸಲಿದ್ದಾರೆ ಎಂದು ಚುನಾವಣೆಗೂ ಮುನ್ನವೇ ಭವಿಷ್ಯ ನುಡಿದಿದ್ದ ಜ್ಯೋತಿಷಿ ರಿಕಿ ರಾಧನ್ ಪಂಡಿತ್ ವೆಟ್ರಿವೇಲ್ ಅವರಿಗೆ ಅದೃಷ್ಟ ಖುಲಾಯಿಸಿದ್ದು , ಇದೀಗ ಮುಖ್ಯಮಂತ್ರಿಯ ವಿಶೇಷ ಕರ್ತವ್ಯಾಧಿಕಾರಿಯಾಗಿ ನೇಮಕಕ್ಕೆ ದಳಪತಿ ಆದೇಶ ನೀಡಿದ್ದಾರೆ.
2024ರಲ್ಲಿ ನಟ ವಿಜಯ್ ಅವರ ರಾಜಕೀಯ ಬೆಳವಣಿಗೆ ಕುರಿತು ರಾಧನ್ ಪಂಡಿತ್ ಭವಿಷ್ಯ ನುಡಿದಿದ್ದರು. ಚುನಾವಣೆಗೂ ಮುನ್ನ ಟಿವಿಕೆ ಗೆಲುವಿನ ಬಗ್ಗೆ ತಿಳಿಸಿದ್ದರು. ಇದೀಗ ಎಲ್ಲವು ಅವರು ನುಡಿದಂತೆ ನಡೆದಿದ್ದು, ವಿಜಯ್ ಸಿಎಂ ಗದ್ದುಗೆ ಏರಿದ್ದಾರೆ.
ಇದರಿಂದ ಜ್ಯೋತಿಷಿಯವರ ಅದೃಷ್ಟವೇ ಬದಲಾಗಿದ್ದು, ಮುಖ್ಯಮಂತ್ರಿ ಕಚೇರಿಯಲ್ಲಿ ವಿಶೇಷ ಕರ್ತವ್ಯ ಅಧಿಕಾರಿಯಾಗಿ ನೇಮಿಸಲಾಗಿದೆ ಎಂದು ಅಧಿಕೃತ ಆದೇಶದಲ್ಲಿ ತಿಳಿಸಲಾಗಿದೆ.
ವೈದಿಕ ಜ್ಯೋತಿಷ್ಯ, ಸಂಖ್ಯಾಶಾಸ್ತ್ರದಲ್ಲಿ ಅನುಭವ ಹೊಂದಿರುವ ರಾಧನ್ ಪಂಡಿತ್ ವೆಟ್ರಿವೇಲ್ ಉನ್ನತ ಮಟ್ಟದ ಸೆಲೆಬ್ರಿಟಿ ಮತ್ತು ರಾಜಕೀಯ ಜ್ಯೋತಿಷಿಗಳಾಗಿದ್ದಾರೆ. ಏಪ್ರಿಲ್ನಲ್ಲಿ ವಿಜಯ್ ಅವರ ಜಾತಕದ ಪ್ರಕಾರ ಅವರಿಗೆ ರಾಜಕೀಯದಲ್ಲಿ ಭರ್ಜರಿ ಯಶಸ್ಸು ಸಿಗಲಿದೆ ಎಂದು ಭವಿಷ್ಯ ನುಡಿದಿದ್ದರು.
ವಿಜಯ್ ಮಾತ್ರವಲ್ಲದೆ, ಮಾಜಿ ಸಿಎಂ ಜಯಲಲಿತಾ ಸೇರಿದಂತೆ ಹಲವಾರು ಪ್ರಮುಖ ರಾಜಕಾರಣಿಗಳು ರಾಧನ್ ಪಂಡಿತ್ ಬಳಿ ಪ್ರತಿ ವಿಚಾರಗಳ ಕುರಿತು ಮಾಹಿತಿ ಪಡೆಯುತ್ತಿದ್ದರು.



