ಹೊಸದಿಗಂತ ಡಿಜಿಟಲ್ ಡೆಸ್ಕ್:
ಕರಾವಳಿಯ ಆರಾಧ್ಯ ದೈವ, ನಂಬಿದ ಭಕ್ತರ ಕಷ್ಟಗಳಿಗೆ ತಕ್ಷಣವೇ ಓಗೊಡುವ ಕಾರಣಿಕ ಶಕ್ತಿ ಸ್ವಾಮಿ ಕೊರಗಜ್ಜನ ಪವಾಡಗಳು ದೇಶಾದ್ಯಂತ ಪ್ರಸಿದ್ಧಿ ಪಡೆದಿವೆ. ಇತ್ತೀಚಿನ ವರ್ಷಗಳಲ್ಲಿ ಚಿತ್ರರಂಗದ ಸಾಲು ಸಾಲು ಗಣ್ಯರು ಮಂಗಳೂರಿಗೆ ಧಾವಿಸಿ ಅಜ್ಜನ ಆಶೀರ್ವಾದ ಪಡೆಯುತ್ತಿದ್ದಾರೆ. ಇದೀಗ ಇದೇ ಸಾಲಿಗೆ ಸ್ಯಾಂಡಲ್ವುಡ್ನ ನಟಿ, ‘ಡಿಂಪಲ್ ಕ್ವೀನ್’ ರಚಿತಾ ರಾಮ್ ಕೂಡ ಸೇರ್ಪಡೆಯಾಗಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಯಶಸ್ವಿಯಾಗಿ 14 ವರ್ಷಗಳನ್ನು ಪೂರೈಸಿರುವ ಸಂಭ್ರಮದಲ್ಲಿರುವ ನಟಿ ರಚಿತಾ ರಾಮ್ ಶನಿವಾರ ರಾತ್ರಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಬೆಂಜನಪದವು ಕೊರಗಜ್ಜ ಕ್ಷೇತ್ರದಲ್ಲಿ ಭಕ್ತಿ-ಭಾವದಿಂದ ಹರಕೆಯ ಕೋಲ ಸೇವೆಯನ್ನು ಸಲ್ಲಿಸಿದ್ದಾರೆ.
ತಮ್ಮ ಈ ದೀರ್ಘಾವಧಿಯ ಯಶಸ್ಸಿಗೆ ಹಾಗೂ ಮನದ ಇಷ್ಟಾರ್ಥ ಸಿದ್ಧಿಗಾಗಿ ಅವರು ಮಂಗಳೂರಿನ ಬೆಂಜನಪದವಿನ ಕೊರಗಜ್ಜ ಕಟ್ಕಟ್ಟೆಯಲ್ಲಿ ಹರಕೆಯ ಕೋಲವನ್ನು ನೀಡಿದ್ದಾರೆ. ಈ ಸಂದರ್ಭದಲ್ಲಿ ದೈವದ ಸನ್ನಿಧಿಗೆ ಆಗಮಿಸಿದ ಭಕ್ತಾದಿಗಳಿಗೆ ಭರ್ಜರಿ ಅನ್ನಸಂತರ್ಪಣೆ ಸೇವೆಯನ್ನೂ ಸಹ ಏರ್ಪಡಿಸಲಾಗಿತ್ತು.



