ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಂಧ್ರಪ್ರದೇಶದ ರಾಜಕೀಯ ಪರಿಸ್ಥಿತಿ ತಮಿಳುನಾಡಿನಂತಿಲ್ಲ ಎಂದು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಸ್ಪಷ್ಟಪಡಿಸಿದ್ದಾರೆ.
ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧಿಸುವುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಸವಾಲು ತರಬಹುದು ಎಂದು ಹೇಳಿದ ಅವರು, ಮೈತ್ರಿ ರಾಜಕಾರಣವೇ ಆಂಧ್ರದಲ್ಲಿ ಯಶಸ್ಸಿನ ಗುಟ್ಟು ಎಂದು ಅಭಿಪ್ರಾಯಪಟ್ಟರು.
ಮಂಗಳಗಿರಿಯಲ್ಲಿರುವ ಪಕ್ಷದ ಕಚೇರಿಯಲ್ಲಿ ನಡೆದ ‘ಜನಸೇನಾ ಉದ್ಯಮಿ ಸಮಾವೇಶ’ದಲ್ಲಿ ಮಾತನಾಡಿದ ಪವನ್ ಕಲ್ಯಾಣ್, ಹಲವು ನಾಯಕರು ಸ್ವತಂತ್ರವಾಗಿ ಪಕ್ಷ ಸ್ಥಾಪಿಸಿ ಮುಖ್ಯಮಂತ್ರಿಗಳಾದ ಉದಾಹರಣೆಗಳನ್ನು ನೀಡುತ್ತಾರೆ. ಆದರೆ ಆಂಧ್ರದ ರಾಜಕೀಯ ವಾಸ್ತವತೆ ಸಂಪೂರ್ಣ ಬೇರೆ ಎಂದು ಹೇಳಿದರು. 2019ರ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಿದ್ದ ಪರಿಣಾಮ ರಾಜಕೀಯ ಹಿನ್ನಡೆ ಅನುಭವಿಸಬೇಕಾಯಿತು ಎಂದು ನೆನಪಿಸಿಕೊಂಡರು.
ಇದನ್ನೂ ಓದಿ:
ವೈಎಸ್ಆರ್ಸಿಪಿ ನಾಯಕರು ಎನ್ಡಿಎ ಮೈತ್ರಿಕೂಟದಲ್ಲಿ ಭಿನ್ನಾಭಿಪ್ರಾಯ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ಕಾರ್ಯಕರ್ತರು ಪ್ರಚಾರಗಳಿಗೆ ಮರುಳಾಗಬಾರದು ಎಂದು ಕರೆ ನೀಡಿದರು. ಜನಸೇನಾ ಪಕ್ಷ ಇಂದು ಲಕ್ಷಾಂತರ ಸದಸ್ಯರೊಂದಿಗೆ ಬೆಳೆದಿರುವುದಕ್ಕೆ ಕಾರ್ಯಕರ್ತರ ಶ್ರಮವೇ ಕಾರಣ ಎಂದರು.
ಇದೇ ವೇಳೆ ಆರೋಗ್ಯ ಸಮಸ್ಯೆಗಳ ನಡುವೆಯೂ ರಾಜಕೀಯ ಚಟುವಟಿಕೆ ಮುಂದುವರಿಸಿರುವುದಾಗಿ ಪವನ್ ಕಲ್ಯಾಣ್ ತಿಳಿಸಿದರು. ಜಾತಿ ಮತ್ತು ಧರ್ಮದ ರಾಜಕಾರಣಕ್ಕಿಂತ ಸಮಾಜವನ್ನು ಒಗ್ಗೂಡಿಸುವ ರಾಜಕೀಯವೇ ಜನಸೇನಾ ಗುರಿ ಎಂದು ಅವರು ಹೇಳಿದರು.



