ಹೊಸದಿಗಂತ ಡಿಜಿಟಲ್ ಡೆಸ್ಕ್:
ದಕ್ಷಿಣ ಕೊರಿಯಾದ ಸಿಯೋಲ್ ನಲ್ಲಿ ನಿರ್ಮಿಸಲಾಗಿರುವ ಭಾರತೀಯ ಸಮರ ಸ್ಮಾರಕವನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೊರಿಯಾ ಗಣರಾಜ್ಯದ ಸಚಿವ ವಾನ್ ಹೋ ಯೂಲ್ ಇಂದು ಜಂಟಿಯಾಗಿ ಉದ್ಘಾಟಿಸಿ, ಪುಷ್ಪನಮನ ಸಲ್ಲಿಸಿದರು.
ಕೊರಿಯಾ ಯುದ್ಧದ 75ನೇ ವರ್ಷಾಚರಣೆ ಅಂಗವಾಗಿ ಈ ಸ್ಮಾರಕವನ್ನು ನಿರ್ಮಿಸಲಾಗಿದೆ. 1950ರಲ್ಲಿ ನಡೆದ ಈ ಯುದ್ಧದಲ್ಲಿ ಭಾರತೀಯ ಸೇನಾಪಡೆಯ 60-ಪ್ಯಾರಾಫೀಲ್ಡ್ ಆಂಬ್ಯುಲೆನ್ಸ್ ದಳದ ಯೋಧರು ಅಪ್ರತಿಮ ಸಾಹಸ ಮತ್ತು ತ್ಯಾಗ- ಬಲಿದಾನ ಮಾಡಿದ್ದರು.
ಯೋಧರ ಧೈರ್ಯ, ಸಾಹಸ, ಬಲಿದಾನದ ಸಂಕೇತ
ಸಚಿವ ರಾಜನಾಥ್ ಸಿಂಗ್, ಸಮರ ಸ್ಮಾರಕ ಭಾರತೀಯ ಯೋಧರ ಧೈರ್ಯ, ಸಾಹಸ, ಮಾನವೀಯತೆ ಮತ್ತು ಬಲಿದಾನದ ಸಂಕೇತವಾಗಿದ್ದು, ಕೊರಿಯಾಕ್ಕೆ ಭಾರತ ಸಲ್ಲಿಸಿದ ಈ ಸೇವೆ ಐತಿಹಾಸಿಕವಾಗಿದೆ. ಸ್ಮಾರಕ ನಿರ್ಮಾಣದಿಂದ ಎರಡೂ ರಾಷ್ಟ್ರಗಳ ನಾಗರಿಕರು ಪರಸ್ಪರ ಅರ್ಥಮಾಡುಕೊಳ್ಳುವಿಕೆ ಹಾಗೂ ಐತಿಹಾಸಿಕ ಬಾಂಧವ್ಯ ಬಲವರ್ಧನೆಗೆ ನೆರವಾಗಲಿದೆ ಎಂದರು. ಉಭಯ ರಾಷ್ಟ್ರಗಳು ನಿಕಟವಾದ ಚಾರಿತ್ರಿಕ ಮತ್ತು ಸಾಂಸ್ಕೃತಿಕ ಬಾಂಧವ್ಯವನ್ನು ಹೊಂದಿದ್ದು, ವಿಶೇಷ ಕಾರ್ಯತಂತ್ರ ಪಾಲುದಾರಿಕೆ ಬಲಪಡಿಸುವ ನಿಟ್ಟಿನಲ್ಲಿ ಒಗ್ಗೂಡಿ ಕಾರ್ಯನಿರ್ವಹಿಸಲಿವೆ ಎಂದು ಹೇಳಿದರು.
ಇದೇ ವೇಳೆ ಎರಡೂ ರಾಷ್ಟ್ರಗಳ ನಡುವಿನ ಸೇನಾ ಸಹಕಾರ ಕುರಿತಂತೆ ಒಡಂಬಡಿಕೆಗೆ ಸಹಿ ಹಾಕಲಾಯಿತು.



