ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ, ಇಂಧನ ದರಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಅವರು ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿಎಂ
ರಾಜ್ಯ ಸರ್ಕಾರವು ಇಂಧನ ಮೇಲಿನ ಸೆಸ್ ಅಥವಾ ತೆರಿಗೆಯನ್ನು ಕಡಿಮೆ ಮಾಡಲಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಖ್ಯಮಂತ್ರಿ,”ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ನೀವು ಏನನ್ನೂ ಮಾತನಾಡುವುದಿಲ್ಲ. ಅವರು ಬೆಲೆ ಹೆಚ್ಚು ಮಾಡುತ್ತಾರೆ, ಹಾಗಂತ ನಾವು ಕಡಿಮೆ ಮಾಡಬೇಕಾ? ಕೇಂದ್ರದ ಬೆಲೆ ಏರಿಕೆಯನ್ನು ನೀವು ಪ್ರಶ್ನಿಸುವುದಿಲ್ಲ, ಆದರೆ ರಾಜ್ಯ ಸರ್ಕಾರ ತೆರಿಗೆ ಕಡಿಮೆ ಮಾಡುತ್ತದೆಯೇ ಎಂದು ಮಾತ್ರ ನಮ್ಮನ್ನು ಕೇಳುತ್ತೀರಿ” ಎಂದು ಆಕ್ರೋಶ ಹೊರಹಾಕಿದ್ದಾರೆ.
ಯುಪಿಎ ಅವಧಿಯ ದರಗಳನ್ನು ನೆನಪಿಸಿದ ಸಿದ್ದರಾಮಯ್ಯ
ಕೇಂದ್ರದ ವಿರುದ್ಧದ ವಾಗ್ದಾಳಿಯನ್ನು ಮುಂದುವರಿಸಿದ ಸಿಎಂ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ದೇಶದಲ್ಲಿ ಡೀಸೆಲ್ ಬೆಲೆ ಪ್ರತಿ ಲೀಟರ್ಗೆ ಕೇವಲ 48 ರೂ., ಪೆಟ್ರೋಲ್ ಬೆಲೆ 70 ರೂ. ಮತ್ತು ಅಡುಗೆ ಅನಿಲ ಬೆಲೆ 414 ರೂ. ಇತ್ತು. ಆದರೆ ಇಂದು ಬೆಲೆಗಳು ಎಲ್ಲೋ ತಲುಪಿವೆ. ಈ ಮಟ್ಟಿಗೆ ಬೆಲೆಗಳನ್ನು ಏರಿಸಿದವರು ಯಾರು?” ಎಂದು ಪ್ರಶ್ನಿಸುವ ಮೂಲಕ ಇಂದಿನ ದುಬಾರಿ ಬೆಲೆಗಳಿಗೆ ಕೇಂದ್ರ ಸರ್ಕಾರವೇ ನೇರ ಹೊಣೆ ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.



