ಹೊಸದಿಗಂತ ವರದಿ ತುಮಕೂರು :
ಚಿಕ್ಕನಾಯಕನಹಳ್ಳಿ ತಾಲೂಕಿನ ಶೆಟ್ಟಿಕೆರೆ ಹೋಬಳಿಯ ಹಾಲುಗೊಣ ಗ್ರಾಮದಲ್ಲಿ ತಡರಾತ್ರಿ ಕಳ್ಳತನಕ್ಕೆ ಯತ್ನಿಸಿ ಕಳ್ಳನೋರ್ವ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ.
ತಡರಾತ್ರಿ ಎರಡು ಗಂಟೆ ಸುಮಾರಿನಲ್ಲಿ ಅಪರಿಚಿತ ವ್ಯಕ್ತಿಗಳ ಗುಂಪು ಗ್ರಾಮದ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಪಂಚಾಕ್ಷರಿ ಹಾಗೂ ಪ್ರಕಾಶ್ ಎಂಬುವರ ಮನೆಗೆ ನುಗ್ಗಲು ಯತ್ನಿಸಿದ್ದು ಸ್ಥಳೀಯರು ಒಟ್ಟುಗೂಡಿ ಕಳ್ಳನನ್ನೇ ಸೆರೆಹಿಡಿದಿದ್ದಾರೆ. ಓರ್ವ ಮಾತ್ರ ಸಿಕ್ಕಿಬಿದ್ದಿದ್ದು ಉಳಿದವರು ಸ್ಥಳದಿಂದ ಪರಾರಿಯಾಗಿದ್ದಾರೆ. ನಂತರ 112 ಗೆ ಕರೆ ಮಾಡಿ ಕಳ್ಳನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ರಕ್ಷಣೆ ನೀಡಬೇಕೆಂದು ಗ್ರಾಮಸ್ಥರ ಒತ್ತಾಯವಾಗಿದೆ.



