ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಬೊಮ್ಮಸಂದ್ರದ ಎಸ್ಎಲ್ಎಸ್ ಮೈದಾನದಲ್ಲಿ ಕೆಎಸ್ಸಿಎ ಲೀಗ್ ಪಂದ್ಯಾವಳಿ ವೇಳೆ ರಣಜಿ ಮಾಜಿ ಆಟಗಾರ ಸಾವನ್ನಪ್ಪಿರುವ ಘಟನೆ ನಡೆದಿದೆ.
ಎಸ್.ಎಲ್. ಅಕ್ಷಯ್ (36) ಮೃತ ಆಟಗಾರ.
ಕುಸಿದು ಬಿದ್ದ ಅಕ್ಷಯ್
ಎಸ್ಎಲ್ಎಸ್ ಕ್ರೀಡಾಂಗಣದಲ್ಲಿ ಕೆಎಸ್ಸಿಎ ನಸೂರ್ ಸ್ಮಾರಕ ಶೀಲ್ಡ್ ಏಕದಿನ ಲೀಗ್ ಪಂದ್ಯಾವಳಿ ಸಮಯ ಶಿವಮೊಗ್ಗದ ಮೂಲದ ಅಕ್ಷಯ್ ಪಂದ್ಯದ ವೇಳೆ 4 ಓವರ್ ಬೌಲಿಂಗ್ ಮುಗಿಸಿ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಹೇಳಿ ಮೈದಾನದಿಂದ ಹೊರಬಂದು ವಿಶ್ರಾಂತಿ ಪಡೆದಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ತಕ್ಷಣ ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಆಸ್ಪತ್ರೆಗೆ ಹೋಗುವಷ್ಟರಲ್ಲಿ ಅವರು ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ರಣಜಿ ಪಂದ್ಯಾವಳಿಗಳನ್ನು ಆಡಿದ ಪ್ರತಿಭಾವಂತ ಆಟಗಾರನೊಬ್ಬ ಪಂದ್ಯದ ಮಧ್ಯೆಯೇ ಹೀಗೆ ಇಹಲೋಕ ತ್ಯಜಿಸಿರುವುದು ತೀವ್ರ ಆಘಾತ ಉಂಟುಮಾಡಿದೆ.
ಕರ್ನಾಟಕ ರಣಜಿ ತಂಡದ ಪರ ಆಡಿದ್ದ ಅಕ್ಷಯ್, 6 ಫಸ್ಟ್ ಕ್ಲಾಸ್, 3 ಲಿಸ್ಟ್ ‘ಎ’ ಹಾಗೂ 9 ಟಿ20 ಪಂದ್ಯಗಳನ್ನು ಆಡಿದ್ದರು. ಆಟಗಾರನಾಗಿ ನಿವೃತ್ತರಾದ ಬಳಿಕ, ರಾಜ್ಯದ ಅಂಡರ್-19 ಕ್ರಿಕೆಟ್ ತಂಡದ ತರಬೇತುದಾರರಾಗಿ ಸೇವೆ ಸಲ್ಲಿಸುತ್ತಿದ್ದರು.



