ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಮದ್ಯಪ್ರಾಚ್ಯದಲ್ಲಿನ ಸಂಘರ್ಷಕ್ಕೆ ಇನ್ನೂ ವಿರಾಮ ಸಿಗದೇ ಜಗತ್ತು ಇಂಧನ ಕೊರತೆಯಿಂದ ಸಂಕಷ್ಟ ಎದುರಿಸುತ್ತಿದ್ದು, ಅದರಲ್ಲೂ ಇರಾನ್ ಮೇಲೆ ದಾಳಿ ನಡೆಸಿದ ಇಸ್ರೇಲ್ ಮೇಲೆ ಜಾಗತಿಕ ಮಟ್ಟದಲ್ಲಿ ಟೀಕೆಗಳು, ಪ್ರತಿಭಟನೆಗಳು ವ್ಯಕ್ತವಾಗುತ್ತಿದೆ. ಇದರ ನಡುವೆ ಭಾರತ ಮಾತ್ರ ತಮ್ಮ ದೇಶದ ಪರವಾಗಿ ನಿಂತಿದೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಬೆಂಜಮಿನ್ ನೆತನ್ಯಾಹು ಅವರು ಹೇಳಿಕೊಂಡಿದ್ದಾರೆ.
ವೆಸ್ಟ್ ಬ್ಯಾಂಕ್ನಲ್ಲಿ ನಡೆದ ಉನ್ನತ ಮಟ್ಟದ ಸಮ್ಮೇಳನವೊಂದರಲ್ಲಿ ಮಾತನಾಡಿದ ಅವರು, ಭಾರತ ಎಂಬ ದೊಡ್ಡ ಶಕ್ತಿಯೊಂದಿಗೆ ಇಸ್ರೇಲ್ನ ವಿಶಿಷ್ಟ ಸಂಬಂಧ ಹೊಂದಿದೆ ಎಂದು ತಿಳಿಸಿದರು.
ಭಾರತೀಯರಿಗೆ ಹುಚ್ಚರಂತೆ ಪ್ರೀತಿ
ಇಂದು ಜಗತ್ತಿನ ಬಹುತೇಕ ಭಾಗಗಳಲ್ಲಿ ನಾವು ಪ್ರತ್ಯೇಕತೆಯನ್ನು ಎದುರಿಸುತ್ತಿದ್ದೇವೆ. ಆದರೆ ಭಾರತದಲ್ಲಿ ಮಾತ್ರ ನಮಗೆ ಅಂತಹ ಯಾವುದೇ ತಾರತಮ್ಯದ ಅನುಭವ ಆಗುವುದಿಲ್ಲ. ಭಾರತದಲ್ಲಿ ಇಸ್ರೇಲ್ನ್ನು ಸಂಪೂರ್ಣವಾಗಿ ಬೆಂಬಲಿಸುವ ದೊಡ್ಡ ಬಳಗವೇ ಇದೆ. ಇಸ್ರೇಲ್ ಮೇಲೆ ಅನೇಕ ಭಾರತೀಯರಿಗೆ ಹುಚ್ಚರಂತೆ ಪ್ರೀತಿ ಇದೆ ಎಂದು ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ವಿಶ್ವದ ಬೇರೆ ಯಾವುದೇ ದೇಶಕ್ಕಿಂತಲೂ ನನಗೆ ಭಾರತದಿಂದಲೇ ಅತಿ ಹೆಚ್ಚು ಸೋಶಿಯಲ್ ಮೀಡಿಯಾ ಅನುಯಾಯಿಗಳು ಇದ್ದಾರೆ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಭಾರತದಂತಹ ಜಾಗತಿಕ ದೊಡ್ಡ ಶಕ್ತಿ ಜೊತೆಗಿದೆ
ಇದೇ ವೇಳೆ ಇಸ್ರೇಲ್ ಜಾಗತಿಕವಾಗಿ ಒಂಟಿಯಾಗಿದೆ ಎಂಬ ವಾದವನ್ನು ತಳ್ಳಿಹಾಕಿದ ನೆತನ್ಯಾಹು, 140 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತದಂತಹ ಜಾಗತಿಕ ದೊಡ್ಡ ಶಕ್ತಿ ಇಸ್ರೇಲ್ ಜೊತೆಗಿದೆ ಎಂದು ಖುಷಿಯಿಂದ ಹೇಳಿಕೊಂಡರು.
ಭಾರತದಲ್ಲಿ ಕುರಿತು ಬೆಂಜಮಿನ್ ನೆತನ್ಯಾಹು ಹೆಮ್ಮೆ ಪಡುತ್ತಿರುವುದು ಇದೇ ಮೊದಲಲ್ಲ. 2018 ರಲ್ಲಿ ತಮ್ಮ ಪತ್ನಿ ಸಾರಾ ಅವರೊಂದಿಗೆ ದಿಲ್ಲಿಗೆ ನೀಡಿದ ಸಮಯದಲ್ಲೂ “ಪ್ರೇಮೋತ್ಸವ” ಎಂದು ಕರೆದಿದ್ದರು. ಈ ವೇಳೆ ಭಾರತೀಯರು ಇಸ್ರೇಲ್ ಬಗ್ಗೆ ;ಅಗಾಧ ಗೌರವ; ಹೊಂದಿದ್ದಾರೆ ಎಂದು ಹೇಳಿಕೊಂಡಿದ್ದರು. ಅದರಲ್ಲೂ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ನಡುವಿನ ಗೆಳೆತನ, ಉಭಯ ದೇಶಗಳ ಸಂಬಂಧವನ್ನು ಗಟ್ಟಿಗೊಳಿಸುವಲ್ಲಿ ಮಹತ್ವದ ಪಾತ್ರನಿರ್ವಹಿಸಿದೆ.



