ಹೊಸ ದಿಗಂತ ವರದಿ, ಮಡಿಕೇರಿ:
ಕಾಡಾನೆಯೊಂದು ಬೆಳ್ಳಂಬೆಳಗ್ಗೆ ಮನೆಯಂಗಳಕ್ಕೆ ನುಗ್ಗಿದ ಘಟನೆ ಭಾನುವಾರ ಬೆಳಗ್ಗೆ ಗೋಣಿಕೊಪ್ಪಲು-ಪೊನ್ನಂಪೇಟೆ ಮುಖ್ಯ ರಸ್ತೆಯ ಅರುವತೊಕ್ಲುವಿನಲ್ಲಿ ನಡೆದಿದೆ.
ಗೋಣಿಕೊಪ್ಪಲು ಪೊನ್ನಂಪೇಟೆ ರಸ್ತೆಯ ಅರುವತ್ತೊಕ್ಲು ಗ್ರಾಮದ ಕಾಫಿ ಬೋರ್ಡ್ ಸಮೀಪವಿರುವ ಕಬ್ಬಚ್ಚಿರ ಬಿದ್ದು ಉತ್ತಪ್ಪ ಎಂಬವರ ಮನೆಯ ಅಂಗಳಕ್ಕೆ ಗೇಟ್ ತೆರೆದು ಕಾಡಾನೆ ಒಳ ನುಗ್ಗಿರುವ ದೃಶ್ಯ ಸಿಸಿಟಿವಿಯಲ್ಲಿ ಸರೆಯಾಗಿದೆ.
ಯಾವುದೇ ವಸ್ತುಗಳಿಗೆ ಹಾನಿ ಮಾಡಿಲ್ಲ
ನಾಯಿಯೊಂದನ್ನು ಅಟ್ಟಿಸಿಕೊಂಡು ಬಂದ ಕಾಡಾನೆ ಅಂಗಳವನ್ನು ಪ್ರವೇಶಿಸಿ ನಂತರ ವಾಪಸ್ ತೆರಳಿದೆ. ಮನೆಯ ಅಂಗಳದಲ್ಲಿದ್ದ ಹೂ ಕುಂಡಗಳು ಸೇರಿದಂತೆ ಯಾವುದೇ ವಸ್ತುಗಳಿಗೆ ಹಾನಿ ಮಾಡದಿರುವುದು ಮಾತ್ರ ವಿಶೇಷ.
ಈ ಬಾರಿ ಹೊಸ ಕಾಡಾನೆ ಎಂಟ್ರಿ
ಈ ಭಾಗದಲ್ಲಿ ಪ್ರತಿವರ್ಷ ಕಾಡಾನೆಯೊಂದು ಮಧ್ಯರಾತ್ರಿ ಕಾಣಿಸಿಕೊಳ್ಳುತ್ತಿತ್ತು. ಕಾಫಿ ಬೋರ್ಡ್ ಸಮೀಪ ಇರುವ ತರಕಾರಿ ಅಂಗಡಿಗೆ ತೆರಳಿ ಹಣ್ಣು ಹಂಪಲುಗಳನ್ನು ತಿಂದು ಹೋಗುತ್ತಿತ್ತು. ಆದರೆ ಈ ಬಾರಿ ಹೊಸ ಕಾಡಾನೆ ಕಾಣಿಸಿಕೊಂಡಿದೆ. ಈ ಭಾಗದಲ್ಲಿರುವ ಕಾಫಿ ತೋಟದ ಒಳಗಡೆ ಈ ಕಾಡಾನೆ ಬೀಡುಬಿಟ್ಟಿರಬಹುದು ಎಂದು ಶಂಕಿಸಲಾಗಿದೆ.



