ಹೊಸದಿಗಂತ ವರದಿ ಬಳ್ಳಾರಿ:
ಸಂಪುಟ ದರ್ಜೆ ಸಚಿವರಾಗಿ ಮೊದಲ ಬಾರಿಗೆ ತವರು ಜಿಲ್ಲೆಗೆ ಇಂದು ಗುರುವಾರ ಆಗಮಿಸಿದ ಸಚಿವ ಬಿ. ನಾಗೇಂದ್ರ ಅವರಿಗೆ, ಕಾರ್ಯಕರ್ತರು ಮತ್ತು ಅಭಿಮಾನಿಗಳು ಅದ್ದೂರಿ ಸ್ವಾಗತ ಕೋರಿದರು.
ತವರಿಗೆ ಆಗಮಿಸಿದ ಸಚಿವರು ಮೊದಲು ನಗರದ ಅಧಿದೇವತೆ ಶ್ರೀ ಕನಕ ದುರ್ಗಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ಈ ವೇಳೆ, ಬಿ.ನಾಗೇಂದ್ರ ಅವರು ಮತ್ತೆ ಸಚಿವರಾಗಬೇಕು ಎಂದು ಹರಕೆ ಹೊತ್ತಿದ್ದ ಅವರ ಕಟ್ಟಾ ಅಭಿಮಾನಿ ಮಲ್ಲೇಶ್ (ಪವನ್) ಎನ್ನುವವರು, ತಮ್ಮ ಹರಕೆ ಈಡೇರಿದ ಹಿನ್ನೆಲೆಯಲ್ಲಿ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿ ಗಮನಸೆಳೆದರು.
ಇದನ್ನೂ ಓದಿ:
ಬೃಹತ್ ಕ್ರೇನ್ ಮೂಲಕ ಶ್ರೀ ಆಂಜನೇಯನ ವೇಷದಲ್ಲಿ ಆಗಮಿಸಿದ ಪವನ್, ಸಚಿವರಿಗೆ ಕೇಸರಿ ಶಾಲು ಹೊದಿಸಿ, ಬೃಹತ್ ಸೇಬಿನ ಹಾರ ಹಾಕಿ, ಆಂಜನೇಯ ಗದ ನೀಡಿ ಪ್ರೀತಿಯಿಂದ ಸನ್ಮಾನಿಸಿದರು. ಈ ವಿಶಿಷ್ಟ ಸ್ವಾಗತ ದೇಗುಲ ಆವರಣದಲ್ಲಿ ನೆರೆದಿದ ಸಾವಿರಾರು ಜನರ ಗಮನ ಸೆಳೆಯಿತು.
ಸಚಿವ ಸ್ಥಾನ ದೊರೆತ ಸಂತಸದಲ್ಲಿ ಹರಕೆ ತೀರಿಸಿದ ಪವನ್ ಅವರ ಈ ವಿಶೇಷ ಗೌರವಕ್ಕೆ ಕಾರ್ಯಕರ್ತರು ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಅಭಿಮಾನಿಗಳು ಸಚಿವರಿಗೆ ಶುಭಾಶಯಗಳನ್ನು ತಿಳಿಸಿ ಸಂಭ್ರಮಿಸಿದರು.



