ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿರುವ ನೂತನ ಬಿಜೆಪಿ ಸರ್ಕಾರದ ಮೊದಲ ಸಚಿವ ಸಂಪುಟ ವಿಸ್ತರಣೆ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಮುಖ್ಯಮಂತ್ರಿ ಸುವೇಂದು ಅಧಿಕಾರಿ ನೇತೃತ್ವದ ಸರ್ಕಾರಕ್ಕೆ ಇಂದು ಭಾರಿ ಬಲ ಬಂದಿದ್ದು, ಒಟ್ಟು 35 ಮಂದಿ ಹೊಸ ಬಿಜೆಪಿ ಶಾಸಕರು ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ರಾಜ್ಯಪಾಲರಿಂದ ಪ್ರಮಾಣ ವಚನ ಬೋಧನೆ
ಕೋಲ್ಕತ್ತಾದಲ್ಲಿರುವ ಲೋಕಭವನದಲ್ಲಿ ಆಯೋಜಿಸಲಾಗಿದ್ದ ಅದ್ಧೂರಿ ಸಮಾರಂಭದಲ್ಲಿ ಪಶ್ಚಿಮ ಬಂಗಾಳದ ಗೌರವಾನ್ವಿತ ರಾಜ್ಯಪಾಲರಾದ ಆರ್.ಎನ್. ರವಿ ಅವರು ನೂತನವಾಗಿ ಆಯ್ಕೆಯಾದ ಎಲ್ಲಾ 35 ಶಾಸಕರಿಗೂ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಿದರು. ಮೇ 9 ರಂದು ಸುವೇಂದು ಅಧಿಕಾರಿ ಅವರು ಬಂಗಾಳದ ನೂತನ ಮುಖ್ಯಮಂತ್ರಿಯಾಗಿ ಪಟ್ಟಕ್ಕೇರಿದ ಸರಿಯಾಗಿ ಮೂರು ವಾರಗಳ ಬಳಿಕ ಈ ಎರಡನೇ ಹಂತದ ಸಂಪುಟ ವಿಸ್ತರಣಾ ಪ್ರಕ್ರಿಯೆ ನಡೆದಿದೆ.
ಸಂವಿಧಾನದ ನಿಯಮ ಏನ ಹೇಳುತ್ತದೆ?
ಭಾರತದ ಸಂವಿಧಾನದ ವಿಧಿ 164(1ಎ) ನಿಯಮಗಳ ಪ್ರಕಾರ, ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 44 ಜನರಿಗೆ ಮಾತ್ರ ಸಚಿವ ಸ್ಥಾನ ನೀಡಲು ಅವಕಾಶವಿದೆ. ಮೊದಲ ಹಂತದಲ್ಲಿ ಸಿಎಂ ಸುವೇಂದು ಅಧಿಕಾರಿ ಅವರೊಂದಿಗೆ ಪ್ರಮುಖ ನಾಯಕರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ನಿಸಿತ್ ಪ್ರಾಮಾಣಿಕ್, ಅಶೋಕ್ ಕೀರ್ತಾನಿಯಾ ಹಾಗೂ ಕ್ಷುದಿರಾಮ್ ತುಡು ಅವರುಗಳು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದು ನಡೆದ ಎರಡನೇ ಹಂತದ ಪ್ರಕ್ರಿಯೆಯೊಂದಿಗೆ ಬಂಗಾಳದ ಸಚಿವ ಸಂಪುಟ ಪೂರ್ಣ ಪ್ರಮಾಣದಲ್ಲಿ ಸಜ್ಜಾದಂತಾಗಿದೆ.
ಸಂಪುಟ ಸೇರಿದ ಪ್ರಮುಖ ನಾಯಕರು ಯಾರು?
ಇಂದು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಮುಖ 35 ಶಾಸಕರಲ್ಲಿ ಹಿರಿಯ ನಾಯಕರಾದ ಅರ್ಜುನ್ ಸಿಂಗ್, ತಪಸ್ ರಾಯ್, ಸಾರದ್ವತ್ ಮುಖರ್ಜಿ, ಜಗನ್ನಾಥ್ ಚಟ್ಟೋಪಾಧ್ಯಾಯ ಮತ್ತು ಶಂಕರ್ ಘೋಷ್ ಅವರುಗಳು ಮುಂಚೂಣಿಯಲ್ಲಿದ್ದಾರೆ. ಇವರ ಜೊತೆಗೆ ಸ್ವಪನ್ ದಾಸ್ಗುಪ್ತಾ, ದೂಧ್ ಕುಮಾರ್ ಮೊಂಡಲ್, ದೀಪಕ್ ಬರ್ಮನ್, ಮನೋಜ್ ಒರಾನ್ ಹಾಗೂ ಗೌರಿ ಶಂಕರ್ ಘೋಷ್ ಅವರಿಗೂ ಸಚಿವ ಸಂಪುಟದಲ್ಲಿ ಅತ್ಯುನ್ನತ ಜವಾಬ್ದಾರಿಗಳನ್ನು ನೀಡಲಾಗಿದೆ.



