ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಬಂಗಾಳದಲ್ಲಿ ಮಾಜಿ ಸಿಎಂ ಮಮತಾ ಬ್ಯಾನರ್ಜಿ ಅವರ ಟಿಎಂಸಿ ಪಕ್ಷವು ಮತ್ತಷ್ಟು ಛಿದ್ರವಾಗುತ್ತಿದ್ದು, ಬಂಡಾಯ ಸಂಸದರ ಸಂಖ್ಯೆ ದಿನೇ-ದಿನೇ ಹೆಚ್ಚಾಗುತ್ತಿದೆ.
20 ಅಲ್ಲ, ಇನ್ನು 22 ಸಂಸದರು
ಇಲ್ಲಿವರೆಗೆ ಗುಂಪಿನ ಸದಸ್ಯರ ಸಂಖ್ಯೆ 20 ಆಗಿತ್ತು. ಇದೀಗ ತೃಣಮೂಲ ಕಾಂಗ್ರೆಸ್ ಬಂಡಾಯ ಬಣ ಸದಸ್ಯೆ ಕಾಕೋಲಿ ಘೋಷ್ ದಸ್ತಿದಾರ್, ಭಾನುವಾರ ಇಬ್ಬರು ಸಂಸದರು ಬಂಡಾಯ ಬಣಕ್ಕೆ ಸೇರುತ್ತಿದ್ದಾರೆ ಎಂದು ಹೇಳಿದ್ದು, ಈ ಮೂಲಕ ನಮಗೆ 22 ಸಂಸದರ ಬೆಂಬಲವಿದೆ ಎಂದು ಹೇಳಿಕೊಂಡಿದ್ದಾರೆ.
ಇಬ್ಬರು ಸಂಸದರ ಹೆಸರು ಬಹಿರಂಗವಾಗಿಲ್ಲ
ಕೋಲ್ಕತ್ತಾದಲ್ಲಿ ಮಾತನಾಡಿದ ಕಾಕೋಲಿ ಘೋಷ್ ದಸ್ತಿದಾರ್, ಪ್ರಸುತ್ತ ಪರಿಸ್ಥಿತಿಯಲ್ಲಿ ಇನ್ನೂ ಒಬ್ಬರು ಅಥವಾ ಇಬ್ಬರು ನಮ್ಮೊಂದಿಗೆ ಸೇರುತ್ತಾರೆ. ಮೊದಲು, ನಾನು 20 ಎಂದು ಹೇಳಿದ್ದೆ, ಈಗ ಅದು 22 ಆಗಿದೆ ಎಂದಿದ್ದಾರೆ. ಆದರೆ ಬೆಂಬಲಿಸುವ ಇಬ್ಬರು ಸಂಸದರ ಹೆಸರನ್ನು ಬಹಿರಂಗಪಡಿಸದ ಅವರು, ಅಧಿಕೃತವಾಗಿ ನಮ್ಮ ಗುಂಪು ಸೇರಿದ ಬಳಿಕ ಬಹಿರಂಗಪಡಿಸಲಾಗುವುದು ಎಂದು ತಿಳಿಸಿದ್ದಾರೆ.
ನಾಳೆ ಲೋಕಸಭಾ ಸ್ಪೀಕರ್ ಭೇಟಿ
ಇನ್ನು ಈ ಬಣವು ಸೋಮವಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಬಣವಾಗಿ ಗುರುತಿಸಲು ಮನವಿ ಮಾಡಲಿದ್ದಾರೆ. ಅದಕ್ಕಾಗಿ ನಾಳೆ ಭೇಟಿಗೆ ಸ್ಪೀಕರ್ ನಮಗೆ ಸಮಯ ನೀಡಿದ್ದಾರೆ. ಈ ವೇಳೆ ನಮ್ಮ ವಿಚಾರವನ್ನು ಸ್ಪೀಕರ್ ಮುಂದೆ ಇಡಲಿದ್ದೇವೆ ಎಂದು ಅವರು ಹೇಳಿದರು.



