ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀಟ್-ಯುಜಿ ಮರುಪರೀಕ್ಷೆಗೆ ಮುಂಚಿತವಾಗಿ ಟೆಲಿಗ್ರಾಂ ಮೆಸೇಜಿಂಗ್ ಆಪ್ ಅನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ತೀವ್ರವಾಗಿ ಟೀಕಿಸಿದ್ದಾರೆ. ಕೇಂದ್ರದ ಈ ಕ್ರಮವನ್ನು “ಹಾಸ್ಯಾಸ್ಪದ” ಎಂದು ಕರೆದಿರುವ ಅವರು, ಪೇಪರ್ ಲೀಕ್ ದಂಧೆಯನ್ನು ತಡೆಯಲು ಸರ್ಕಾರದ ಬಳಿ ಯಾವುದೇ ಪ್ರಾಮಾಣಿಕ ಉದ್ದೇಶವಿಲ್ಲ ಎಂದು ಆರೋಪಿಸಿದ್ದಾರೆ.
ಪರೀಕ್ಷಾ ಅಕ್ರಮ ತಡೆಗೆ ಟೆಲಿಗ್ರಾಂ ತಾತ್ಕಾಲಿಕ ಬ್ಯಾನ್
ಜೂನ್ 21 ರಂದು ನಡೆಯಲಿರುವ ನೀಟ್-ಯುಜಿ ಮರುಪರೀಕ್ಷೆಯಲ್ಲಿ ನಕಲು ಜಾಲಗಳನ್ನು ತಡೆಗಟ್ಟಲು ಮತ್ತು ತಪ್ಪು ಮಾಹಿತಿ ಹರಡುವುದನ್ನು ತಡೆಯುವ ಉದ್ದೇಶದಿಂದ ಜೂನ್ 22 ರವರೆಗೆ ಟೆಲಿಗ್ರಾಂ ಬಳಕೆಯ ಮೇಲೆ ತಾತ್ಕಾಲಿಕ ನಿರ್ಬಂಧ ಹೇರಲು ಸರ್ಕಾರ ಮಂಗಳವಾರ ಆದೇಶಿಸಿದೆ.
ಮರುಪರೀಕ್ಷೆಯನ್ನು ಯಾವುದೇ ಅಕ್ರಮಗಳಿಲ್ಲದೆ ಅತ್ಯಂತ ಪಾರದರ್ಶಕವಾಗಿ ನಡೆಸಲು ಈ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ (NTA) ಮಹಾನಿರ್ದೇಶಕ ಅಭಿಷೇಕ್ ಸಿಂಗ್ ತಿಳಿಸಿದ್ದಾರೆ. ಇದರ ಭಾಗವಾಗಿ ಗೂಗಲ್ ಪ್ಲೇ ಸ್ಟೋರ್ ಮತ್ತು ಆಪಲ್ ಆಪ್ ಸ್ಟೋರ್ಗಳಿಂದ ಟೆಲಿಗ್ರಾಂ ಆಪ್ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕಲು ಸರ್ಕಾರ ಸೂಚನೆ ನೀಡಿದೆ.
ಕೇಂದ್ರದ ವಿರುದ್ಧ ಕೇಜ್ರಿವಾಲ್ ಗಂಭೀರ ಆರೋಪ
ಈ ಕುರಿತು ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅರವಿಂದ್ ಕೇಜ್ರಿವಾಲ್, ಕೇಂದ್ರ ಸರ್ಕಾರದ ಈ ಕ್ರಮಗಳು ಕೇವಲ ಸಾಂಕೇತಿಕ ಎಂದಿದ್ದಾರೆ. “ಸೇನಾ ವಿಮಾನಗಳ ಮೂಲಕ ಪರೀಕ್ಷಾ ಪೇಪರ್ಗಳನ್ನು ಸಾಗಿಸುವುದು ಮತ್ತು ಟೆಲಿಗ್ರಾಂ ಅನ್ನು ಮುಚ್ಚುವುದು ತೀರಾ ಹಾಸ್ಯಾಸ್ಪದ ಕ್ರಮಗಳಾಗಿವೆ. ಇಂತಹ ನಿರ್ಧಾರಗಳಿಂದ ಪೇಪರ್ ಲೀಕ್ ನಿಲ್ಲಿಸಲು ಸಾಧ್ಯವೇ? ಖಂಡಿತ ಇಲ್ಲ” ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಪೇಪರ್ ಲೀಕ್ ವ್ಯವಸ್ಥೆಯು ಕೋಟ್ಯಂತರ ರೂ.ಗಳ ದೊಡ್ಡ ದಂಧೆಯಾಗಿದ್ದು, ಇದರ ಲಾಭವು ಅಧಿಕಾರದಲ್ಲಿರುವವರಿಗೆ ತಲುಪುತ್ತಿದೆ ಮತ್ತು ಚುನಾಯಿತ ಪ್ರತಿನಿಧಿಗಳ ಮೇಲೆ ಪ್ರಭಾವ ಬೀರಲು ಈ ಹಣವನ್ನು ಬಳಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಆತಂಕ
ಮೇ 3 ರಂದು ದೇಶಾದ್ಯಂತ ನಡೆದಿದ್ದ ನೀಟ್-ಯುಜಿ ಪರೀಕ್ಷೆಯಲ್ಲಿ ಭಾರಿ ಅಕ್ರಮಗಳು ಮತ್ತು ಪೇಪರ್ ಲೀಕ್ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ಮೇ 12 ರಂದು ಎನ್ಟಿಎ (NTA) ಪರೀಕ್ಷೆಯನ್ನು ರದ್ದುಗೊಳಿಸಿತ್ತು. ಇದರಿಂದಾಗಿ ದೇಶದ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿ ವಿದ್ಯಾರ್ಥಿಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.



