ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದಲ್ಲಿ ಹಿಂದೂಗಳು ಬಹುಸಂಖ್ಯಾತರಲ್ಲ ಎಂಬ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (AIMPLB) ಸದಸ್ಯ ಮೌಲಾನಾ ಸಜ್ಜಾದ್ ನೋಮಾನಿ ಹೇಳಿಕೆ ಈಗ ದೇಶದಲ್ಲಿ ಹೊಸ ರಾಜಕೀಯ, ಸಾಮಾಜಿಕ ಚರ್ಚೆಗೆ ಕಿಡಿ ಹಚ್ಚಿದೆ. ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ಸಿಖ್ಖರು, ಬೌದ್ಧರು, ಕ್ರೈಸ್ತರು, ಆದಿವಾಸಿಗಳು, ಲಿಂಗಾಯತರು ಸೇರಿದಂತೆ ಹಲವು ಸಮುದಾಯಗಳನ್ನು ಹಿಂದೂಗಳ ಲೆಕ್ಕದಲ್ಲಿ ಸೇರಿಸಲಾಗುತ್ತಿದೆ. ಆದರೆ ಈ ಸಮುದಾಯಗಳ ಪ್ರತ್ಯೇಕ ಗುರುತನ್ನು ಪರಿಗಣಿಸಿದರೆ, ಹಿಂದೂಗಳು ಬಹುಸಂಖ್ಯಾತರು ಎನ್ನುವ ವಾದವೇ ಪ್ರಶ್ನಾರ್ಹವಾಗುತ್ತದೆ ಎಂದು ಮೌಲಾನಾ ನೋಮಾನಿ ಹೇಳಿದ್ದಾರೆ.
30 ವರ್ಷಗಳ ಅಧ್ಯಯನದ ಬಳಿಕ ಹೇಳುತ್ತಿದ್ದೇನೆ!
ಈ ನಡುವೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ನೋಮಾನಿ, ದೇಶದ ವಿವಿಧ ಭಾಗಗಳಲ್ಲಿ ಮೂರು ದಶಕಗಳ ಕಾಲ ನಡೆಸಿದ ಅಧ್ಯಯನದ ಆಧಾರದ ಮೇಲೆ ಈ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಧಾರ್ಮಿಕ ಗುರುತು ಮತ್ತು ಜನಸಂಖ್ಯೆ ಕುರಿತ ಚರ್ಚೆಯಲ್ಲಿ ಹಲವು ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಕಡೆಗಣಿಸಲಾಗುತ್ತಿದೆ ಎಂದು ಅವರು ಇದೆ ಸಂದರ್ಭದಲ್ಲಿ ಆರೋಪಿಸಿದ್ದಾರೆ.
ನೋಮಾನಿ ಹೇಳಿಕೆಗೆ ಬಿಜೆಪಿ ನಾಯಕರು ಹಾಗೂ ಹಲವು ಹಿಂದೂ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ. ಇದು ಸಮಾಜವನ್ನು ವಿಭಜಿಸುವ ಪ್ರಯತ್ನ ಎಂದು ಆರೋಪಿಸಿರುವ ನಾಯಕರು, ದೇಶದ ಅಧಿಕೃತ ಜನಗಣತಿ ಅಂಕಿಅಂಶಗಳನ್ನೇ ಪ್ರಶ್ನಿಸುವ ರೀತಿಯ ಹೇಳಿಕೆಗಳು ಅಪಾಯಕಾರಿ ಎಂದು ಎಚ್ಚರಿಸಿದ್ದಾರೆ.



