June 21, 2026
Sunday, June 21, 2026
spot_img

ಸುವರ್ಣ ವಿಧಾನಸೌಧದಲ್ಲಿ ಯೋಗ ಸಂಭ್ರಮ: ಆರೋಗ್ಯಕರ ರಾಷ್ಟ್ರ ನಿರ್ಮಾಣಕ್ಕೆ ಪ್ರಹ್ಲಾದ ಜೋಶಿ ಕರೆ

ಹೊಸದಿಗಂತ ವರದಿ ಬೆಳಗಾವಿ:

ಯೋಗಾಸನ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಪಾತ್ರ ಹೊಂದಿದ್ದು, ಪ್ರತಿನಿತ್ಯ ಯೋಗಾಸನ ಮಾಡುವುದರಿಂದ ನಮ್ಮ ಶರೀರದಲ್ಲಿನ ರೋಗ ರುಜಿನಗಳನ್ನು ದೂರ ಮಾಡಿಕೊಳ್ಳುವುದರ ಜೊತೆಗೆ ಮನಸ್ಸನ್ನು ಸಮಚಿತ್ತದಿಂದ ಇಟ್ಟುಕೊಳ್ಳಬಹುದಾಗಿದೆ ಎಂದು ಗ್ರಾಹಕರ ವ್ಯವಹಾರಗಳ, ಆಹಾರ ಮತ್ತು ಸಾರ್ವಜನಿಕ ವಿತರಣೆ ಮತ್ತು ಹೊಸ ಹಾಗೂ ನವೀಕರಿಸಬಹುದಾದ ಇಂಧನ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಬೆಳಗಾವಿ ಹಾಗೂ ಜಿಲ್ಲಾ ಆಯುಷ ಇಲಾಖೆ ಸಹಯೋಗದಲ್ಲಿ ಭಾನುವಾರ ಸುವರ್ಣ ವಿಧಾನ ಸೌಧದಲ್ಲಿ ಜರುಗಿದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬದಲಾಗುತ್ತಿರುವ ಇಂದಿನ‌ ಆಧುನಿಕ ಜೀವನ ಶೈಲಿಯಲ್ಲಿ ಉತ್ತಮ‌ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ಭಾರತದ ಪ್ರಾಚೀನ ಪದ್ಧತಿಯಾದಂತಹ ಯೋಗಾಸನ ಮಾಡುವುದು ಅತೀ ಅವಶ್ಯಕವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಸ್ಪರ್ಧಾತ್ಮಕ ಜಿವನ ಶೈಲಿಯಲ್ಲಿ ನಮ್ಮ ನಿತ್ಯದ ಕೆಲಸದಲ್ಲಿ ನಿಪುಣತೆಯನ್ನು ಸಾಧಿಸಲು ಯೋಗಾಸನ ಅಗತ್ಯವಾಗಿದ್ದು ಯೋಗಾಸನ ಮಾಡಲು ಸರಿಯಾದ ಆಸನದ ಜ್ಞಾನ ಹೊಂದುವುದು ಕೂಡಾ ಅಷ್ಟೇ ಪ್ರಮುಖವಾಗಿದೆ. ವೇದ ಉಪನಿಷತ್ತುಗಳ ಪ್ರಕಾರ ಜೂನ್ 21 ನೇ ದಿನ ಪ್ರಾಮುಖ್ಯತೆಯನ್ನು ಹೊಂದಿದ ದಿನವಾದ್ದರಿಂದ ಅಂತಾರಾಷ್ಟ್ರೀಯ ಯೋಗ ದಿನವನ್ನಾಗಿ ಆಚರಿಸಲಾಗುತ್ತಿದೆ.

ಐದು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಯೋಗಾಸನವನ್ನು 140 ಕ್ಕೂ ಹೆಚ್ಚಿನ ದೇಶಗಳು ಒಪ್ಪಿಕೊಂಡಿವೆ.
ದಿನದ ಇಪ್ಪತ್ತನಾಲ್ಕು ಗಂಟೆಗಳಲ್ಲಿ ಪ್ರಪಂಚದ ಯಾವುದಾದರೂ ಒಂದು ಪ್ರದೇಶದಲ್ಲಿ ಯೋಗಾಭ್ಯಾಸ ಜರುಗುತ್ತಿರುವುದರಿಂದ ಯೋಗಾಸನಕ್ಕೆ ಗೋಲ್ಡನ್ ರಿಂಗ್ ಎಂದು ಕರೆಯಲಾಗುತ್ತದೆ ಎಂದರು.

ಇದನ್ನೂ ಓದಿ:

ಯೋಗಾಸನ ಮಾಡಿದಷ್ಟು ದೇಹ ಹಾಗೂ ಮನಸ್ಸನ್ನು ನಿಯಂತ್ರಿಸಬಹುದಾಗಿದ್ದು ಪ್ರತಿಯೊಬ್ಬರು ಯೋಗಾಭ್ಯಾಸ ಮಾಡುವುದನ್ನು ತಮ್ಮ ದಿನಚರಿಯಲ್ಲಿ ಅಳವಡಿಸಿಕೊಂಡು ಸಧೃಡ ಆರೋಗ್ಯ, ಸಧೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗುವಂತೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರು ಕರೇ ನೀಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಅಭಯ ಪಾಟೀಲ, ಬೆಳಗಾವಿ ಮಹಾನಗರ ಪಾಲಿಕೆ ಮಹಾಪೌರೆ ಪ್ರೀತಿ ಕಾಮಕಾರ, ಉಪ ಮಹಾಪೌರ ಹನುಂಮತ‌ ಕೊಂಗಾಲಿ, ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್,ಪೋಲಿಸ್ ಆಯುಕ್ತ ಭೋರಸೆ ಗುಲಾಬರಾವ್ ಭೂಷಣ,ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಜಿಲ್ಲಾ‌ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ ಶಿಂಧೆ, ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ ಎಂ,ಪ್ರಶಿಕ್ಷಣಾರ್ಥಿ ಆಯ್.ಎ.ಎಸ್.ಅಧಿಕಾರಿ ರೋಹಿತ್ ಸಿಂಗ್, ಜಿಲ್ಲಾ ಆಯುಷ್ ಅಧಿಕಾರಿ ಶ್ರೀಕಾಂತ ಸುಣದೊಳಿ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಯೋಗಾಸಕ್ತರು ಭಾಗವಹಿಸಿದ್ದರು.

ಅಂತಾರಾಷ್ಟ್ರಿಯ ಯೋಗ ತರಬೇತಿದಾರರಾದ ಆರತಿ ಸಂಕೇಶ್ವರಿ ಅವರ ಮಾರ್ಗದರ್ಶನದಲ್ಲಿ ಅಂತಾರಾಷ್ಟ್ರೀಯ ಯೋಗ ಪಟುಗಳಾದ ಸತ್ಯಮ್ ಹಾಗೂ ಗಾಯತ್ರಿ ಅವರುಗಳಿಂದ ವಿವಿಧ ಯೋಗಾಸನದ ಭಂಗಿಗಳನ್ನು ಪ್ರದರ್ಶಿಸಿ ಅವುಗಳ ಮಹತ್ವವನ್ನು ವಿವರಿಸಿದರು. ತದನಂತರ ವಿವಿಧ ಶಾಲಾ ವಿಧ್ಯಾರ್ಥಿಗಳಿಂದ ಸಾಂಸ್ಕತಿಕ ಕಾರ್ಯಕ್ರಮಗಳು ಜರುಗಿದವು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !