ಹೊಸದಿಗಂತ ವರದಿ ಬೆಳಗಾವಿ:
ಪರಿಷತ್ ಚುನಾವಣೆಯ ಅಡ್ಡ ಮತದಾನಕ್ಕೆ ಸಂಬಂಧಿಸಿದಂತೆ ಮುಂದಿನ ಎರಡು ದಿನಗಳಲ್ಲಿ ಪಕ್ಷದ ಹೈಕಮಾಂಡ್ಗೆ ಪ್ರಾಥಮಿಕ ಹಾಗೂ ಮಧ್ಯಂತರ ವರದಿಯನ್ನು ಸಲ್ಲಿಸಲಾಗುವುದು ಎಂದು ಸತ್ಯಶೋಧನಾ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತಿಳಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳಿಂದ ಒಟ್ಟು 12 ಮತಗಳು ವ್ಯತ್ಯಾಸವಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಗೌಪ್ಯ ಮತದಾನ ಆಗಿರುವ ಹಿನ್ನೆಲೆಯಲ್ಲಿ ಮತಗಳ ಕೊರತೆ ಎದುರಾಗಿದೆ. ಇದರಲ್ಲಿ ಒಂದು ಮತ ಕುಲಗೆಟ್ಟಿದೆ (ಅಸಿಂಧು). ತಲಾ 30 ವೋಟುಗಳಂತೆ ಪ್ರತ್ಯೇಕವಾಗಿ ಯೋಜನೆ ರೂಪಿಸಿ ಜವಾಬ್ದಾರಿ ಹಂಚಲಾಗಿತ್ತು. ಆದರೆ ಈಗ ಲೆಕ್ಕಾಚಾರ ಉಲ್ಟಾ ಆಗಿದೆ ಎಂದರು.
ಯಾವ ಶಾಸಕರು ಕ್ರಾಸ್ ವೋಟಿಂಗ್ ಮಾಡಿದ್ದಾರೆ ಎನ್ನುವುದರ ಬಗ್ಗೆ ಸದ್ಯಕ್ಕೆ ಯಾರ ಮೇಲೂ ನಾವು ನೇರ ಆರೋಪ ಮಾಡುವುದಿಲ್ಲ. ಕೇವಲ ಸಾಂದರ್ಭಿಕ ಸಾಕ್ಷ್ಯಗಳನ್ನು ಮತ್ತು ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಅನುಮಾನಿಸಬಹುದಷ್ಟೇ ಹೊರತು, ಇವರೇ ತಪ್ಪು ಮಾಡಿದ್ದಾರೆ ಎಂದು ಸಾರಲು ಸಾಧ್ಯವಿಲ್ಲ. ಸತ್ಯಶೋಧನೆ ನಡೆಸಿ ನಿಖರವಾದ ವರದಿ ಕೊಡುವ ಕೆಲಸವನ್ನು ಸಮಿತಿ ಪ್ರಾಮಾಣಿಕವಾಗಿ ಮಾಡಲಿದೆ. ವರದಿ ಸಲ್ಲಿಕೆಯಾದ ಬಳಿಕ ಪಕ್ಷದ ಶಿಸ್ತು ಸಮಿತಿಯು ಮುಂದಿನ ಕ್ರಮಗಳ ಬಗ್ಗೆ ಆಲೋಚನೆ ಮಾಡಲಿದೆ ಎಂದು ಹೇಳಿದರು.



