ಹೊಸದಿಗಂತ ಡಿಜಿಟಲ್ ಡೆಸ್ಕ್:
ಆಹಾರ ಅರಸಿ ಕಾಡಿನಿಂದ ನಾಡಿಗೆ ಬರಲು ಯತ್ನಿಸಿದ ಕಾಡಾನೆಯೊಂದು ರೈಲ್ವೆ ಹಳಿಗಳ ಬ್ಯಾರಿಕೇಡ್ ಕಬ್ಬಿಣದ ಕಂಬಗಳ ನಡುವೆ ಸಿಲುಕಿ ತೀವ್ರವಾಗಿ ಕಷ್ಟಪಡುತ್ತಿರುವ ಘಟನೆ ಕನಕಪುರ ತಾಲೂಕಿನ ಅರೆಕೊಪ್ಪ ಗ್ರಾಮದ ಬಳಿ ನಡೆದಿದೆ.
ಅರೆಕೊಪ್ಪ ಗ್ರಾಮವು ಕಾವೇರಿ ವನ್ಯಜೀವಿ ವಲಯದ ಮುಗ್ಗೂರು ಅರಣ್ಯದ ಕಾಡಂಚಿನಲ್ಲಿದೆ. ಇತ್ತೀಚಿನ ದಿನಗಳಲ್ಲಿ ಆಹಾರ ಮತ್ತು ನೀರನ್ನು ಹುಡುಕುತ್ತಾ ವನ್ಯಜೀವಿಗಳು ನಾಡಿಗೆ ಬರುವುದು ಸಾಮಾನ್ಯವಾಗಿದೆ. ಅದೇ ರೀತಿ ಮುಗ್ಗೂರು ಅರಣ್ಯ ಪ್ರದೇಶದಿಂದ ಹೊರಬರಲು ಯತ್ನಿಸಿದ ಕಾಡಾನೆಯೊಂದು ಆನೆಗಳು ನಾಡಿಗೆ ಬರದಂತೆ ತಡೆಯಲು ನಿರ್ಮಿಸಲಾಗಿದ್ದ ರೈಲ್ವೆ ಬ್ಯಾರಿಕೇಡ್ನ ಕಬ್ಬಿಣದ ಕಂಬಗಳ ಮಧ್ಯೆ ಸಿಲುಕಿಕೊಂಡಿದೆ. ಕಂಬದಿಂದ ಹೊರಕ್ಕೆ ಬರಲು ಆನೆಗೆ ಆಗಿಲ್ಲ. ಸುಮಾರು ಹೊತ್ತಿನಿಂದ ಪ್ರಯತ್ನಿಸಿದ ಆನೆಗೆ ಸುಸ್ತಾಗಿದೆ.
ಕಬ್ಬಿಣದ ಕಂಬಗಳ ನಡುವೆ ದೇಹ ಸಿಲುಕಿಕೊಂಡಿದ್ದರಿಂದ ಆನೆಗೆ ಮುಂದೆ ಹೋಗಲು ಅಥವಾ ಹಿನ್ನೆಡೆಯಲು ಸಾಧ್ಯವಾಗದೆ ತೀವ್ರವಾಗಿ ನರಳಾಡಿದೆ. ಆನೆಯ ಕಿರುಚಾಟವನ್ನು ಕೇಳಿ ಸ್ಥಳೀಯ ಗ್ರಾಮಸ್ಥರು ಧಾವಿಸಿದ್ದು, ತಕ್ಷಣವೇ ಕಾವೇರಿ ವನ್ಯಜೀವಿ ವಿಭಾಗದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಆನೆಯಲ್ಲಿ ಬ್ಯಾರಿಕೇಡ್ನಿಂದ ಹೊರಕ್ಕೆ ತೆಗೆಯುವ ಯತ್ನ ನಡೆಯುತ್ತಿದೆ.



