ಹೊಸದಿಗಂತ ವರದಿ ಗದಗ:
ಪಟಾಕಿ ಶಾಟ್ಸ್ ನ ಕಿಡಿ ತಾಗಿ ಟಿವಿಎಸ್ ಎಕ್ಸೆಲ್ ಗೆ ಬೆಂಕಿ ಹೊತ್ತಿಕೊಂಡ ಘಟನೆ ನಗರದ ಮಹೇಂದ್ರಕರ ವೃತ್ತದ ಬಳಿ ಶುಕ್ರವಾರ ತಡರಾತ್ರಿ ನಡೆದಿದೆ.
ನಗರದ ಮಹೇಂದ್ರಕರ ವೃತ್ತದ ಬಳಿಯ ಖಾಸಗಿ ಮೊಬೈಲ್ ಅಂಗಡಿಯಲ್ಲಿ ಮೊಬೈಲ್ ಖರೀದಿಸಿದ ಖುಷಿಯಲ್ಲಿ ಯುವಕರು ಆಕಾಶದೆತ್ತರಕ್ಕೆ ಹಾರುವ ಪಟಾಕಿ ಶಾಟ್ಸ್ ಹಚ್ಚಿದ್ದಾರೆ. ಈ ವೇಳೆ ಪಟಾಕಿ ಶಾಟ್ಸ್ ಗಳು ಆಕಾಶಕ್ಕೆ ಹಾರುವ ಬದಲು ರಸ್ತೆಯಲ್ಲಿ ಅಡ್ಡಲಾಗಿ ಹಾರಿದ್ದರಿಂದ ಟಿವಿಎಸ್ ಎಕ್ಸೆಲ್ ಗೆ ಪಟಾಕಿ ಕಿಡಿ ತಾಗಿ ಬೆಂಕಿ ಹೊತ್ತಿಕೊಂಡಿದೆ.
ಕೂಡಲೇ ಮಾರುಕಟ್ಟೆಯ ಸುತ್ತಮುತ್ತಲಿನ ಜನರು ಟಿವಿಎಸ್ ಎಕ್ಸೆಲ್ ಗೆ ಹತ್ತಿದ್ದ ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ಟಿವಿಎಸ್ ಎಕ್ಸೆಲ್ ನ ಪೆಟ್ರೋಲ್ ಪೈಪ್ ಗೆ ಪಟಾಕಿ ಕಿಡಿ ತಾಕಿ ಪೆಟ್ರೋಲ್ ಸೋರಿಕೆಯಾಗಿದ್ದರಿಂದ ಬೆಂಕಿ ಎಷ್ಟೇ ನಂದಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಸುತ್ತಲಿನ ಜನರು ಸಾಕಷ್ಟು ಪ್ರಮಾಣದಲ್ಲಿ ನೀರು ಸುರಿದು, ಪೆಟ್ರೋಲ್ ಪೈಪ್ ನ ಕಾಕ್ ನ್ನು ಬಂದ ಮಾಡಿದ್ದರಿಂದ ಬೆಂಕಿ ನಂದಿಸಲು ಸಾಧ್ಯವಾಯಿತು. ಈ ವೇಳೆ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು.
ಟಿವಿಎಸ್ ಎಕ್ಸೆಲ್ ಗೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಮಾರುಕಟ್ಟೆಯ ಕೆಲ ಅಂಗಡಿಕಾರರು ಭಯದಿಂದ ತಮ್ಮ ಅಂಗಡಿಗಳು ಬಾಗಿಲು ಹಾಕಲು ಯತ್ನಿಸಿದರು. ಟಿವಿಎಸ್ ಎಕ್ಸೆಲ್ ಗೆ ಬೆಂಕಿ ಹತ್ತಿದ ಜಾಗದಲ್ಲೇ ತಂಪು ಪಾನೀಯದ ಅಂಗಡಿ ಇದ್ದುದರಿಂದ ಬೆಂಕಿ ನಂದಿಸಲು ಸಾಕಷ್ಟು ಪ್ರಮಾಣದ ನೀರು ದೊರೆತು ಬೆಂಕಿ ನಂದಿಸಲು ಸಾಧ್ಯವಾಯಿತು. ಇಲ್ಲವಾದಲ್ಲಿ ಟಿವಿಎಸ್ ಎಕ್ಸೆಲ್ ಸಂಪೂರ್ಣ ಬೆಂಕಿಗಾಹುತಿಯಾಗುತ್ತಿತ್ತು.
ಒಟ್ಟಿನಲ್ಲಿ ಆಕಾಶಕ್ಕೆ ಹಾರಬೇಕಿದ್ದ ಪಟಾಕಿ ಶಾಟ್ಸ್ ರಸ್ತೆಯಲ್ಲಿ ಹಾರಿದ್ದರಿಂದ ಅವಘಡ ಆಗಿದ್ದು, ಯಾವುದೇ ಹಾನಿ ಸಂಭವಿಸದಿರುವುದು ಮಾರುಕಟ್ಟೆ ಜನರು ನಿಟ್ಟುಸಿರು ಬಿಡುವಂತಾಯಿತು.



