July 5, 2026
Sunday, July 5, 2026
spot_img

ಮಳೆ ಅಬ್ಬರಕ್ಕೆ ಜೀವ ತುಂಬಿದ ‘ಬೆಳಗಾವಿಯ ನಯಾಗರ’: ಪ್ರಕೃತಿಯ ರಮಣೀಯ ರೂಪಕ್ಕೆ ಮನಸೋತ ಪ್ರವಾಸಿಗರು

ಹೊಸದಿಗಂತ ವರದಿ ಬೆಳಗಾವಿ:

ರಾಜ್ಯಾದ್ಯಂತ ಮುಂಗಾರು ಮಳೆ ತೀವ್ರಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯ ಸುಪ್ರಸಿದ್ಧ ಪ್ರವಾಸಿ ತಾಣವಾದ ‘ಬೆಳಗಾವಿಯ ನಯಾಗರ’ ಖ್ಯಾತಿಯ ಗೋಕಾಕ್ ಜಲಪಾತವು ಸದ್ಯ ಸಂಪೂರ್ಣ ಕಳೆಗಟ್ಟಿದೆ.

ಕಳೆದ ಕೆಲವು ದಿನಗಳಿಂದ ಘಟಪ್ರಭಾ ನದಿಯ ಜಲಾನಯನ ಪ್ರದೇಶದಲ್ಲಿ ವರುಣನ ಆರ್ಭಟ ಜೋರಾಗಿದ್ದು, ಜಲಪಾತಕ್ಕೆ ನೀರಿನ ಒಳಹರಿವು ಗಣನೀಯವಾಗಿ ಹೆಚ್ಚಾಗಿದೆ. ನದಿಯ ನೀರು ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರಕೃತಿಯ ಈ ಮನಮೋಹಕ ಹಾಗೂ ರೌದ್ರ ರಮಣೀಯ ಸೌಂದರ್ಯವನ್ನು ಕಣ್ಣುಂಬಿಕೊಳ್ಳಲು ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

ಭೋರ್ಗರೆವ ಜಲಪಾತ, ಉಕ್ಕಿ ಹರಿಯುವ ಸೌಂದರ್ಯ:

ಮಲೆನಾಡು ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಗೋಕಾಕ್ ಜಲಪಾತಕ್ಕೆ ಜೀವಕಳೆ ಬಂದಿದೆ. ನೂರಾರು ಅಡಿ ಎತ್ತರದಿಂದ ಹಾಲಿನ ನೊರೆಯಂತೆ ಧುಮ್ಮಿಕ್ಕುತ್ತಿರುವ ನೀರಿನ ಭೋರ್ಗರೆತ ಹಾಗೂ ಅಲ್ಲಿ ಸೃಷ್ಟಿಯಾಗುತ್ತಿರುವ ಹನಿಗಳ ಮಂಜಿನ ವಾತಾವರಣ ಸಾರ್ವಜನಿಕರ ಆಕರ್ಷಣೀಯ ಕೇಂದ್ರವಾಗಿ ಮಾರ್ಪಟ್ಟಿದೆ.

ವಾರಾಂತ್ಯದ ದಿನಗಳಲ್ಲಂತೂ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ನೆರೆಯ ಮಹಾರಾಷ್ಟ್ರ, ಗೋವಾ ರಾಜ್ಯಗಳಿಂದಲೂ ಸಾವಿರಾರು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ. ಹಸಿರಿನ ನಡುವೆ ಜಲಪಾತದ ವೈಭೋಗವನ್ನು ಕಂಡು ಜನರು ಮೈ ಮನ ಮರೆಯುತ್ತಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !