ಹೊಸದಿಗಂತ ವರದಿ ಶ್ರೀರಂಗಪಟ್ಟಣ:
ಕ್ರಿಕೆಟ್ ಬೆಟ್ಟಿಂಗ್ ನಲ್ಲಿ ನಷ್ಟವಾಗಿ ಯುವಕನೊಬ್ಬ ಕೆಆರ್ಎಸ್ ಜಲಾಶಯದ ಬಳಿಯ ನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೆಆರ್ ಪೇಟೆ ತಾಲೂಕಿನ ದೊಡ್ಡಗಡಿಗನಹಳ್ಳಿ ಗ್ರಾಮದ ನಿವಾಸಿ ರಾಜೇಗೌಡರ ಪುತ್ರ ಕಿರಣ್ (27) ಎಂದು ತಿಳಿದು ಬಂದಿದೆ.
ಈತ ಕೆಆರ್ಎಸ್ ಜಲಾಶಯದ ಬಳಿ ಇರುವ ನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ವಿಡಿಯೋ ಮಾಡಿ ತನ್ನ ತಂದೆಯ ಮೊಬೈಲ್ಗೆ ಕಳುಹಿಸಿ, ನಂತರ ನಾಲೆಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಮಾಹಿತಿ ತಿಳಿದ ಕೆಆರ್ಎಸ್ ಪೊಲೀಸರು ಸ್ಥಳ ಪರಿಶೀಲಿಸಿ, ಅಗ್ನಿಶಾಮಕ ದಳ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಆಗಮಿಸಿ ನಾಲೆಗೆ ಹಾರಿದ್ದ ಯುವಕ ಶವವನ್ನು ಪತ್ತೆ ಹಚ್ಚಿ ಮೇಲೆತ್ತಿ ಪೋಷಕರಿಗೆ ಒಪ್ಪಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ನಲ್ಲಿ ಆಗಿರುವ ಸಾಲದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಕೆಆರ್ಎಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



