ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ಅತಿ ಹೆಚ್ಚು ಭದ್ರತೆ ಹೊಂದಿರುವ ಧಾರ್ಮಿಕ ಕ್ಷೇತ್ರವಾದ ಅಯೋಧ್ಯೆಯ ಶ್ರೀರಾಮ ಮಂದಿರದ ಕಾಣಿಕೆ ಹಣ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದೆ. ಈಗಾಗಲೇ ಜೈಲು ಪಾಲಾಗಿರುವ ಎಂಟು ಆರೋಪಿಗಳ ಪೈಕಿ ನಾಲ್ವರು ತಾವು ಮಾಡಿದ ಅಪರಾಧವನ್ನು ಪೊಲೀಸರ ಎದುರು ಒಪ್ಪಿಕೊಂಡಿದ್ದಾರೆ. ನ್ಯಾಯಾಲಯದ ಅನುಮತಿಯೊಂದಿಗೆ ಜೈಲಿನಲ್ಲೇ ನಡೆದ ವಿಚಾರಣೆಯ ವೇಳೆ ಆರೋಪಿಗಳಾದ ಅನುಕಲ್ಪ್ ಮಿಶ್ರಾ, ಲವಕುಶ ಮಿಶ್ರಾ ಹಾಗೂ ಕರುಣೇಶ್ ಪಾಂಡೆ ಕಳ್ಳತನದ ರಹಸ್ಯಗಳನ್ನು ಬಿಚ್ಚಿಟ್ಟಿದ್ದಾರೆ. ಇದಕ್ಕೂ ಮುನ್ನ ಮತ್ತೊಬ್ಬ ಆರೋಪಿ ಅವಿನಾಶ್ ಶುಕ್ಲಾ ಕೂಡ ತನಿಖೆಗೆ ಸಹಕರಿಸಿ ದರೋಡೆಯ ವಿವರಗಳನ್ನು ನೀಡಿದ್ದನು.
ಕೀ ಸಿಕ್ಕಿದ್ದೇ ತಡ, ಕೋಟಿ ಕೋಟಿ ಲೂಟಿ!
ಮಂದಿರದ ಮೇಲ್ವಿಚಾರಕ ಸುಭಾಷ್ ಶ್ರೀವಾಸ್ತವ್ ಹಾಗೂ ಟಿನ್ನು ಯಾದವ್ ಎಂಬುವವರ ಸಹಾಯದಿಂದ ಈ ದೊಡ್ಡ ಮಟ್ಟದ ಕಳ್ಳತನ ನೆರವೇರಿದೆ. ಟಿನ್ನು ಯಾದವ್ ಬಳಿ ಹುಂಡಿ ಎಣಿಕೆ ಕೇಂದ್ರದ ಮುಖ್ಯ ಕೀಲಿ ಕೈ ಇರುತ್ತಿತ್ತು. ಇದನ್ನು ಬಳಸಿಕೊಂಡು ಆರಂಭದಲ್ಲಿ ಸಣ್ಣ ಮೊತ್ತವನ್ನು ಕದಿಯುತ್ತಿದ್ದ ಈ ಗ್ಯಾಂಗ್, ನಂತರದ ದಿನಗಳಲ್ಲಿ ಕೋಟ್ಯಂತರ ರೂಪಾಯಿ ಮಂದಿರದ ಹಣವನ್ನು ಎಗರಿಸಲು ಆರಂಭಿಸಿತ್ತು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಕದ್ದ ಹಣ ವೈಟ್ ಮಾಡಲು ಸ್ಕೆಚ್
ದೋಚಿದ ಕೋಟ್ಯಂತರ ರೂಪಾಯಿ ಹಣ ಸಿಕ್ಕಿಬೀಳದಂತೆ ಮಾಡಲು ಈ ಆರೋಪಿಗಳು ವ್ಯವಸ್ಥಿತ ಮಾಸ್ಟರ್ ಪ್ಲ್ಯಾನ್ ರೂಪಿಸಿದ್ದರು. ಕದ್ದ ನಗದು ಹಣವನ್ನು ಮೊದಲು ತಮ್ಮ ಸ್ನೇಹಿತರು ಹಾಗೂ ಹತ್ತಿರದ ಸಂಬಂಧಿಕರಿಗೆ ಹಂಚುತ್ತಿದ್ದರು. ತದನಂತರ ಅವರ ಮೂಲಕ ಬೇರೆ ಬೇರೆ ಬ್ಯಾಂಕ್ ಖಾತೆಗಳಿಗೆ ಹಣವನ್ನು ವರ್ಗಾವಣೆ ಮಾಡಿಸಿ ಕಾನೂನಿನ ಕಣ್ಣಿಗೆ ಮಣ್ಣೆರಚಲು ಯತ್ನಿಸಿರುವುದಾಗಿ ತನಿಖೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಸದ್ಯ ಪೊಲೀಸರು ಈ ಜಾಲದ ಸಂಪೂರ್ಣ ತನಿಖೆ ಮುಂದುವರಿಸಿದ್ದಾರೆ.



