ಹೊಸದಿಗಂತ ವರದಿ ಅಂಕೋಲಾ
ಅಂಕೋಲಾ: ದೇಶದ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾಗಿ ಗುರುತಿಸಿಕೊಂಡಿರುವ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೆಸರಿಗೆ ಕಳಂಕ ತರುವ ಅಂತರಾಷ್ಟ್ರೀಯ ಮಟ್ಟದ ಹುನ್ನಾರ ಖಂಡಿಸಿ ಕಲ್ಬುರ್ಗಿಯಲ್ಲಿ ನಡೆದ ಅತಿ ಹಿಂದುಳಿದ ಮಠಾಧೀಶರ ಮಹಾಸಭೆ ಹಮ್ಮಿಕೊಳ್ಳಲಾಗಿದ್ದು, ಈ ಚಿಂತನ ಶಿಬಿರದಲ್ಲಿ50 ಕ್ಕೂ ಹೆಚ್ಚಿನ ಹಿಂದುಳಿದ ಸಮುದಾಯದ ಸ್ವಾಮಿಗಳು ಧರ್ಮಸ್ಥಳದ ಪರವಾಗಿ ನಿಲ್ಲಲು ಒಮ್ಮತದ ನಿರ್ಣಯ ತೆಗೆದುಕೊಂಡಿರುವುದಾಗಿ ಅತಿ ಹಿಂದುಳಿದ ಮಠಾಧೀಶರ ಮಹಾಸಭೆಯ ರಾಜ್ಯಾಧ್ಯಕ್ಷ ಈಡಿಗ ಸಮಾಜದ ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತೆಗೆದುಕೊಂಡ ನಿರ್ಣಯದಂತೆ ಮಹಾಸಭೆಯ ವತಿಯಿಂದ ಬೆಂಬಲ ಪತ್ರವನ್ನು ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ಸನ್ನಿಧಿಗೆ ಸಮರ್ಪಿಸಿ ಶ್ರೀಕ್ಷೇತ್ರದ ಪರವಾಗಿ ಪ್ರಾಮಾಣಿಕವಾಗಿ ನಿಲ್ಲುವ ಭರವಸೆಯನ್ನು ನೀಡುವುದಾಗಿ ಸ್ವಾಮಿ ಪ್ರಣವಾನಂದರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:
ಮಹಾಸಭೆಯ ನಂತರ ಧರ್ಮಸ್ಥಳ ಕ್ಷೇತ್ರಕ್ಕೆ ಭೇಟಿ ನೀಡಿ ಬೆಂಬಲ ಪತ್ರವನ್ನು ವೀರೇಂದ್ರ ಹೆಗ್ಗಡೆ ಅವರಿಗೆ ನೀಡಲಾಗಿದ್ದು ಇತ್ತೀಚಿನ ವರ್ಷಗಳಲ್ಲಿ ನಡೆಯುತ್ತಿರುವ ಷಡ್ಯಂತ್ರದ ಮಾಹಿತಿ ಪಡೆಯಲಾಗಿದೆ, ಹಿಂದುಳಿದ ಮಠಾಧೀಶರ ಮಹಾಸಭೆಯು ದೇವಾಲಯದ ಮತ್ತು ಧರ್ಮಾಧಿಕಾರಿಗಳ ಪರ ಇರುವುದಾಗಿ ಹೇಳಿ ಧರ್ಮಾಧಿಕಾರಿಗಳಿಗೆ ಮಹಾಸಭೆಯ ವತಿಯಿಂದ ಶ್ರೀಬಸವಮೂರ್ತಿ ಕುಂಬಾರ ಗುಂಡಯ್ಯ ಸ್ವಾಮಿಜಿ, ಶ್ರೀಮಹಾಂತದೇವರು, ಶ್ರೀಮಂಜು ಮಹಾರಾಜ, ಶ್ರೀಪ್ರಕಾಶ ಮಹಾರಾಜ,ಶಿವಮೂರ್ತಿ ಮಹಾಸ್ವಾಮಿ,ಆತ್ಮಾನಂದ ಸ್ವಾಮೀಜಿ ಮೊದಲಾದವರ ಉಪಸ್ಥಿತಿಯಲ್ಲಿ ಗೌರವ ಸಮರ್ಪಣೆ ಮಾಡಲಾಯಿತು ಎಂದು ಸ್ವಾಮಿ ಪ್ರಣವಾನಂದರು ತಿಳಿಸಿದ್ದಾರೆ.



