ಹೊಸದಿಗಂತ ಡಿಜಿಟಲ್ ಡೆಸ್ಕ್:
ಪುಣೆಯ ಯುವ ಉದ್ಯಮಿ ಕೇತನ್ ಅಗರ್ವಾಲ್ ಹತ್ಯೆ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿದೆ. ಇದೀಗ ಮಗನನ್ನು ಕಳೆದುಕೊಂಡು ಕಣ್ಣೀರಲ್ಲಿ ಕೈ ತೊಳೆಯುತ್ತಿರುವ ತಾಯಿ ರಾಖಿ ಅಗರ್ವಾಲ್, ಹಂತಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಾವುಕ ಪತ್ರ ಬರೆದಿದ್ದಾರೆ. ತನಗಾದ ಅನ್ಯಾಯ ಮತ್ಯಾವ ತಾಯಿಗೂ ಆಗಬಾರದು ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಮುರಿದುಬಿದ್ದ ಎರಡು ತಲೆಮಾರು
“ನನ್ನ ಮಗನ ಚಿತೆಗೆ ನಾನೇ ಅಗ್ನಿಸ್ಪರ್ಶ ಮಾಡಬೇಕಾಗಿ ಬಂತು. ಒಬ್ಬ ತಾಯಿಗೆ ಇದಕ್ಕಿಂತ ದೊಡ್ಡ ನರಕವಿಲ್ಲ” ಎಂದು ರಾಖಿ ಅಗರ್ವಾಲ್ ಅಳಲು ತೋಡಿಕೊಂಡಿದ್ದಾರೆ. ಕೇತನ್ ಹತ್ಯೆಯಾದ ಕೇವಲ 20 ದಿನಗಳಲ್ಲಿ, ಮೊಮ್ಮಗನ ಅಗಲಿಕೆಯ ದುಃಖ ತಾಳಲಾರದೆ ಆತನ ತಾತ (ರಾಖಿ ಅವರ ಮಾವ) ಕೂಡ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಇಡೀ ಕುಟುಂಬವೇ ಧ್ವಂಸಗೊಂಡಿದೆ.
ಕೇವಲ ಫೈಲ್ ಆಗಿ ಉಳಿಯದಿರಲಿ ಕೇಸ್
ತಮಗೆ ಯಾವುದೇ ವಿಶೇಷ ಸೌಲಭ್ಯ ಬೇಡ, ಕೇವಲ ನ್ಯಾಯ ಬೇಕು ಎಂದು ಪ್ರಧಾನಿ ಸಮ್ಮುಖದಲ್ಲಿ ರಾಖಿ ಬೇಡಿಕೆಯಿಟ್ಟಿದ್ದಾರೆ. ಪ್ರಕರಣ ವಿಳಂಬವಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಮತ್ತು ಕೇತನ್ ಸಾವನ್ನು ಕೇವಲ ಪೊಲೀಸ್ ದಾಖಲೆಯಾಗಿ ಉಳಿಸಬಾರದು ಎಂದು ವಿನಂತಿಸಿದ್ದಾರೆ. ಪ್ರತಿದಿನ ಮಗನ ಫೋಟೋ ನೋಡಿ ಕಣ್ಣೀರಿಡುತ್ತಿರುವ ಈ ತಾಯಿ, ಪ್ರಧಾನಿಯವರು ತಮಗೆ ನ್ಯಾಯ ಕೊಡಿಸುತ್ತಾರೆ ಎಂಬ ಭರವಸೆಯಲ್ಲಿದ್ದಾರೆ.



