ಹೊಸದಿಗಂತ ಡಿಜಿಟಲ್ ಡೆಸ್ಕ್:
ನೇಪಾಳದ ಚಿತ್ವನ್ ರಾಷ್ಟ್ರೀಯ ಉದ್ಯಾನವನದ ಸಮೀಪದ ಮಡಿ ಪಟ್ಟಣದಲ್ಲಿ ವಾಸಿಸುತ್ತಿದ್ದ ಶನಿಚರ ಬೋಟೆ ಕುಟುಂಬಕ್ಕೆ 2012 ರ ಡಿಸೆಂಬರ್ ಕರಾಳ ದಿನವಾಗಿತ್ತು. ‘ಧುರ್ಬೆ’ ಹೆಸರಿನ ಕಾಡಾನೆಯೊಂದು ಇವರ ತಂದೆ-ತಾಯಿಯನ್ನು ಕ್ರೂರವಾಗಿ ತುಳಿದು ಸಾಯಿಸಿತ್ತು.
ಸುರಕ್ಷತೆಗಾಗಿ ಊರು ಬದಲಿಸಿದ್ದ ಕುಟುಂಬ
ಭೀತಿಗೊಳಗಾದ ಶನಿಚರ ಬೋಟೆ, ಆನೆಯ ಕಾಟದಿಂದ ದೂರವಿರಲು 14 ಕಿಲೋಮೀಟರ್ ದೂರದಲ್ಲಿದ್ದ ಜಗತ್ಪುರ್ ಪ್ರದೇಶಕ್ಕೆ ವಲಸೆ ಹೋದರು. ದೊಡ್ಡದಾದ ರಾಪ್ತಿ ನದಿಯನ್ನು ದಾಟಿ ಹೋದರೆ ಆನೆ ತಮಗೆ ತೊಂದರೆ ಕೊಡುವುದಿಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು.
ಮತ್ತೆ ಹುಡುಕಿ ಬಂತು ಸಾವು!
ಆದರೆ ವಿಧಿಯ ಆಟ ಬೇರೆಯೇ ಇತ್ತು. ಇತ್ತೀಚೆಗೆ ಅದೇ ಧುರ್ಬೆ ಆನೆ ರಾಪ್ತಿ ನದಿ ದಾಟಿ ಜಗತ್ಪುರ್ನಲ್ಲಿರುವ ಶನಿಚರ ಅವರ ಹೊಸ ಮನೆಗೆ ನುಗ್ಗಿದೆ. ಮನೆಯಲ್ಲಿದ್ದ 25 ವರ್ಷದ ಸೊಸೆ ಆಶಿಕಾ ಬೋಟೆ ಮತ್ತು 4 ವರ್ಷದ ಪುಟ್ಟ ಮೊಮ್ಮಗ ಭರತ್ ಬೋಟೆಯನ್ನು ಜಜ್ಜಿ ಕೊಂದಿದೆ.
ಕಣ್ಣೀರಲ್ಲಿ ಮುಳುಗಿದ ಶನಿಚರ
“ನದಿಯ ಆಚೆ ಬಂದರೆ ನಾವು ಬದುಕಿಕೊಳ್ಳುತ್ತೇವೆ ಅಂದುಕೊಂಡಿದ್ದೆವು. ಆದರೆ ಇಷ್ಟು ವರ್ಷಗಳ ನಂತರವೂ ಅದೇ ಆನೆ ನಮ್ಮನ್ನು ಹುಡುಕಿಕೊಂಡು ಬಂದು ಸಂಸಾರವನ್ನು ಬೀದಿಪಾಲು ಮಾಡಿದೆ. ಈಗ ನಾವು ಎಲ್ಲಿಗೆ ಹೋಗಬೇಕು?” ಎಂದು ಶನಿಚರ ಬೋಟೆ ಕಣ್ಣೀರಿಟ್ಟಿದ್ದಾರೆ. ಒಂದೇ ಆನೆಗೆ ಒಂದೇ ಕುಟುಂಬದ ನಾಲ್ವರು ಬಲಿಯಾಗಿರುವುದು ಇಡೀ ನೇಪಾಳವನ್ನೇ ಬೆಚ್ಚಿಬೀಳಿಸಿದೆ.



