ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲದ ಮಧ್ಯೆಯೇ ಕರಾವಳಿ ಜಿಲ್ಲೆ ಉತ್ತರ ಕನ್ನಡದಲ್ಲಿ ವಿಲಕ್ಷಣ ಹವಾಮಾನ ಸೃಷ್ಟಿಯಾಗಿದ್ದು, ಮುಂದಿನ ಎರಡು ದಿನಗಳ ಕಾಲ ತೀವ್ರ ಬಿಸಿಗಾಳಿ ಹಾಗೂ ತೇವಾಂಶಯುಕ್ತ ವಾತಾವರಣ ಮುಂದುವರಿಯುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ‘ಯೆಲ್ಲೋ ಅಲರ್ಟ್’ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಮಳೆಯ ಪ್ರಮಾಣ ಗಣನೀಯವಾಗಿ ಇಳಿಕೆಯಾಗಿದ್ದು, ಮಳೆಯ ಕೊರತೆಯ ಬೆನ್ನಲ್ಲೇ ಒಮ್ಮೆಗೆ ಉಷ್ಣಾಂಶ ಏರಿಕೆಯಾಗಿ ಸಾರ್ವಜನಿಕರು ಬಿಸಿಲಿನ ಬೇಗೆಯಿಂದ ತತ್ತರಿಸುವಂತಾಗಿದೆ.
ಇದನ್ನೂ ಓದಿ:
ಆರೋಗ್ಯ ಇಲಾಖೆಯ ಮುನ್ನೆಚ್ಚರಿಕೆ
ಮಳೆಗಾಲದ ಹಬೆ ಮತ್ತು ವಾತಾವರಣದಲ್ಲಿನ ತೇವಾಂಶದ ಕಾರಣದಿಂದಾಗಿ ಮಧ್ಯಾಹ್ನದ ವೇಳೆಗೆ ಬಿಸಿಯ ಅನುಭವ ಸಾಮಾನ್ಯಕ್ಕಿಂತಲೂ ವಿಪರೀತವಾಗಿ ಕಾಡುತ್ತಿದೆ. ಪ್ರಸ್ತುತ ಹವಾಮಾನದ ಏರುಪೇರಿನ ಹಿನ್ನೆಲೆಯಲ್ಲಿ ವಿಶೇಷವಾಗಿ ಮಕ್ಕಳು, ವೃದ್ಧರು ಹಾಗೂ ಅನಾರೋಗ್ಯದಿಂದ ಬಳಲುತ್ತಿರುವವರು ತೀವ್ರ ಮುನ್ನೆಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ.
ಮಳೆಗಾಲದ ಜುಲೈ ತಿಂಗಳಿನಲ್ಲಿ ಎಂದೂ ಕಾಣದ ಇಂತಹ ಬಿಸಿಗಾಳಿಯ ವಾತಾವರಣ ಸೃಷ್ಟಿಯಾಗಿರುವುದು ಜಿಲ್ಲೆಯ ಜನರಲ್ಲಿ ತೀವ್ರ ಆತಂಕವನ್ನು ಮೂಡಿಸಿದೆ.



