ಹೊಸದಿಗಂತ ಡಿಜಿಟಲ್ ಡೆಸ್ಕ್:
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪ ಎದುರಿಸುತ್ತಿದ್ದ ರಾಜ್ಯದ ಸಚಿವ ಬಿ.ಜೆ. ಜಮೀರ್ ಅಹ್ಮದ್ ಖಾನ್ಗೆ ಬಿಗ್ ರಿಲೀಫ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೋಷಾರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಅಧಿಕಾರಿಗಳು ಕೋರಿದ್ದ ಪ್ರಾಸಿಕ್ಯೂಷನ್ ಅನುಮತಿಯನ್ನು ರಾಜ್ಯಪಾಲರು ಅಧಿಕೃತವಾಗಿ ತಿರಸ್ಕರಿಸಿದ್ದಾರೆ.
ರಾಜ್ಯಪಾಲರ ಈ ತೀರ್ಮಾನದಿಂದಾಗಿ ಕಾನೂನು ಹೋರಾಟದ ದೊಡ್ಡ ತೂಗುಗತ್ತಿಯಿಂದ ಸಚಿವ ಜಮೀರ್ ಅಹ್ಮದ್ ಸದ್ಯಕ್ಕೆ ಪಾರಾದಂತಾಗಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ.
ಏನಿದು ಪ್ರಕರಣ?
ಸಚಿವ ಜಮೀರ್ ಅಹ್ಮದ್ ಖಾನ್ ತಮ್ಮ ಕಾನೂನುಬದ್ಧ ವಾರ್ಷಿಕ ಆದಾಯಕ್ಕಿಂತ ಸುಮಾರು 25 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಅಕ್ರಮವಾಗಿ ಗಳಿಸಿದ್ದಾರೆ ಎಂದು ಲೋಕಾಯುಕ್ತ ಇಲಾಖೆ ತನಿಖೆ ನಡೆಸಿತ್ತು. ಜಮೀರ್ ಅಹ್ಮದ್ ವಿರುದ್ಧ ಅಕ್ರಮ ಆಸ್ತಿ ಗಳಿಕೆಗೆ ಪೂರಕವಾದ ಬಲವಾದ ಪುರಾವೆಗಳು ಸಿಕ್ಕಿವೆ ಎಂದು ಪ್ರತಿಪಾದಿಸಿದ್ದ ಲೋಕಾಯುಕ್ತ ಅಧಿಕಾರಿಗಳು, ಕಳೆದ ಗುರುವಾರವಷ್ಟೇ ರಾಜಭವನಕ್ಕೆ ಭೇಟಿ ನೀಡಿ ತನಿಖಾ ದಾಖಲೆಗಳನ್ನು ಸಲ್ಲಿಕೆ ಮಾಡಿದ್ದರು. ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲು ರಾಜ್ಯಪಾಲರ ಪೂರ್ವಾನುಮತಿ ಕಡ್ಡಾಯವಾಗಿದ್ದರಿಂದ ಈ ಮನವಿ ಸಲ್ಲಿಕೆಯಾಗಿತ್ತು.
ಇದನ್ನೂ ಓದಿ:
ರಾಜ್ಯಪಾಲರ ಮಹತ್ವದ ನಡೆ:
ಲೋಕಾಯುಕ್ತ ಅಧಿಕಾರಿಗಳು ಸಲ್ಲಿಸಿದ ದಾಖಲೆಗಳು ಮತ್ತು ಮನವಿಯನ್ನು ಕೂಲಂಕಷವಾಗಿ ಪರಿಶೀಲಿಸಿದ ರಾಜ್ಯಪಾಲರು, ಸಚಿವರ ವಿರುದ್ಧದ ಪ್ರಾಸಿಕ್ಯೂಷನ್ ಕೋರಿಕೆಯನ್ನು ಒಪ್ಪದೆ ತಿರಸ್ಕರಿಸಿದ್ದಾರೆ. ಈ ಮಹತ್ವದ ಬೆಳವಣಿಗೆಯು ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.



