ಹೊಸದಿಗಂತ ವರದಿ ಬೀದರ್:
ಮಳೆಗಾಗಿ ಪ್ರಾರ್ಥಿಸಿ ಉತ್ತಮ ಮಳೆಯಾಗಲೆಂದು ಬೀದರ್ ತಾಲೂಕಿನ ಕಂಗನಕೋಟ ಗ್ರಾಮದಲ್ಲಿ ಗ್ರಾಮಸ್ಥರು ಸಂಪ್ರದಾಯಬದ್ಧವಾಗಿ ಬುಟ್ಟಿ ಜಾತ್ರೆ ಆಚರಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಎಲ್ಲ ರೈತರು ಜಾತಿ-ಭೇದ ಮರೆತು ಒಗ್ಗಟ್ಟಿನಿಂದ ಸೇರಿ ಸಿದ್ದೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಗ್ರಾಮಸ್ಥರೆಲ್ಲರೂ ಒಟ್ಟಾಗಿ ಕುಳಿತು ಸಾಮೂಹಿಕ ಭೋಜನ ಸವಿದು ಸಾಮಾಜಿಕ ಸಾಮರಸ್ಯ ಮತ್ತು ಏಕತೆಯ ಸಂದೇಶ ಸಾರಿದರು.

ಜಾತ್ರೆಯ ಅಂಗವಾಗಿ ಮಹಿಳೆಯರಿಗೆ ಕಬಡ್ಡಿ, ಖೋ-ಖೋ ಹಾಗೂ ಬುಲಾಯಿ ಪದ ಸೇರಿದಂತೆ ವಿವಿಧ ಸಾಂಪ್ರದಾಯಿಕ ಆಟಗಳನ್ನು ಆಯೋಜಿಸಲಾಗಿದ್ದು, ಪುರುಷರ ಕೋಲಾಟ ಎಲ್ಲರ ಗಮನ ಸೆಳೆಯಿತು. ಗ್ರಾಮದ ಜನರು ಉತ್ಸಾಹದಿಂದ ಭಾಗವಹಿಸಿ ಸಂಪ್ರದಾಯವನ್ನು ಸಂಭ್ರಮದಿಂದ ಆಚರಿಸಿದರು.
ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಟ್ರಸ್ಟ್ ಅಧ್ಯಕ್ಷ ಕೇದಾರನಾಥ ಶಂಭು, ಕಾರ್ಯದರ್ಶಿ ಧನಶೆಟ್ಟಿ ಶಂಭು, ಮಕ್ಕಳ ಸಾಹಿತ್ಯ ಪರಿಷತ್ ಕಾರ್ಯದರ್ಶಿ ಓಂಕಾರ ಪಾಟೀಲ, ವಿಜಯಕುಮಾರ, ನಿಜಗುಣ, ಕಂಟೆಪ್ಪ ಓತಿ, ಕಮಲಾಕರ ಶಂಭು, ಸುನೀಲ್ ಭುಳ್ಳ, ಶಿವು, ಅಶೋಕ, ಬಾಬು ಮಲಶೆಟ್ಟಿ, ಸಚಿನ್, ಶ್ರೀಮತಿ ಪುತಳಾಬಾಯಿ, ಸಂಗೀತ ಓತಿ, ಪ್ರೇಮಲತಾ, ಸಂಗೀತ, ಶಾರದಾಬಾಯಿ ಸೇರಿದಂತೆ ಗ್ರಾಮದ ಪ್ರಮುಖರು, ಹಿರಿಯರು, ಮಹಿಳೆಯರು ಹಾಗೂ ಮಕ್ಕಳು ಭಾಗವಹಿಸಿದ್ದರು.



