ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರನ್ನು ಭೇಟಿಯಾಗಲು ದಿನವಿಡೀ ಕಾದು ಕುಳಿತಿದ್ದ ಲಂಡನ್ ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಹೌದು, ಭದ್ರತಾ ಕಾರಣಗಳಿಂದ ಜೋಸೆಫ್ ವಿಜಯ್ ಲಂಡನ್ ಭೇಟಿ ರದ್ದಾಗಿದ್ದು, ದಿನವಿಡೀ ಕಾದಿದ್ದ ಅಭಿಮಾನಿಗಳು ನಿರಾಸೆಯಿಂದ ಮನೆಯತ್ತ ಹೆಜ್ಜೆ ಹಾಕಿದ್ದಾರೆ. ಲಂಡನ್ನ ಎತ್ತರದ ಕಟ್ಟಡ ದಿ ಶಾರ್ಡ್ ಹೊರಗೆ ನೂರಾರು ಅಭಿಮಾನಿಗಳು ಜಮಾಯಿಸಿದ್ದರು. ಆದರೆ ಭದ್ರತಾ ಕಾರಣಗಳಿಂದ ಮೆಟ್ರೋಪಾಲಿಟನ್ ಪೊಲೀಸರು ಕಾರ್ಯಕ್ರಮವನ್ನು ರದ್ದು ಮಾಡಿದ್ದಾರೆ.
ಸಾರ್ವಜನಿಕರ ಸುರಕ್ಷತೆ ದೃಷಿಯಿಂದ ಕಾರ್ಯಕ್ರಮವನ್ನು ರದ್ದು ಮಾಡುತ್ತಿದ್ದೇವೆ. ಇಲ್ಲಿ ಕಾರ್ಯಕ್ರಮ ನಡೆಸಲು ನಮಗೆ ಅನುಮತಿ ದೊರೆತಿಲ್ಲ ಎಂದು ಸಿಎಂ ತಂಡದ ಸದಸ್ಯರೊಬ್ಬರು ಘೋಷಣೆ ಮಾಡಿದ್ದು, ಜನ ಬೇಸರ ವ್ಯಕ್ತಪಡಿಸಿದ್ದಾರೆ.
ಬಹಳ ಹೊತ್ತಿನಿಂದ ಸಿಎಂ ವಿಜಯ್ ಅವರನ್ನು ನೋಡಲು ಕಾಯುತ್ತಾ ಕುಳಿತಿದ್ದೆವು. ನಿರಾಸೆ ಆಗಿದೆ. ಆದರೆ ಇಂಥ ದೊಡ್ಡ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರೆ ನಮಗೆ ತಿಳಿಯದ ಕಾರಣಗಳಿರುತ್ತವೆ. ಇನ್ನೊಮ್ಮೆ ಚಾನ್ಸ್ ಸಿಗುತ್ತದೆ ಬಿಡಿ ಎಂದು ಅಭಿಮಾನಿಯೊಬ್ಬರು ಹೇಳಿದ್ದಾರೆ.
ತಮಿಳುನಾಡಿಗೆ ಹೂಡಿಕೆಗಳನ್ನು ಆಕರ್ಷಿಸಲು ವಿಜಯ್ ಅವರು ರಾಜ್ಯದ ನಿಯೋಗವೊಂದನ್ನು ಮುನ್ನಡೆಸಿಕೊಂಡು ಯುನೈಟೆಡ್ ಕಿಂಗ್ಡಮ್ಗೆ ತೆರಳಿದ್ದಾರೆ.ತಮಿಳುನಾಡನ್ನು ಏಷ್ಯಾದ ಪ್ರಮುಖ ಸುಧಾರಿತ ಉತ್ಪಾದನಾ ಮತ್ತು ತಂತ್ರಜ್ಞಾನ ಕೇಂದ್ರವನ್ನಾಗಿ ರೂಪಿಸುವ ಗುರಿಯನ್ನು ಹೊಂದಿರುವ ಈ ಹೂಡಿಕೆ ಅಭಿಯಾನವು, ರಾಜ್ಯಾದ್ಯಂತ 9,400ಕ್ಕೂ ಹೆಚ್ಚು ಉನ್ನತ ಮೌಲ್ಯದ ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.



