ಹೊಸದಿಗಂತ ಡಿಜಿಟಲ್ ಡೆಸ್ಕ್:
ದೆಹಲಿಯ ಪ್ರಸಿದ್ಧ ಜಂತರ್ ಮಂತರ್ ಪ್ರದೇಶದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಪರವಾಗಿ ಹೋರಾಟ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ದೆಹಲಿ ಪೊಲೀಸರು ನಡೆಸಿದ್ದರೆನ್ನಲಾದ ಬಲಪ್ರಯೋಗ ಹಾಗೂ ಲಾಠಿ ಪ್ರಹಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ನ್ಯಾಯಪೀಠವು, “ನಿಮ್ಮ ಸಮಯವನ್ನೂ ಹಾಳುಮಾಡಿಕೊಳ್ಳಬೇಡಿ, ನ್ಯಾಯಾಲಯದ ಅಮೂಲ್ಯ ಸಮಯವನ್ನೂ ನಷ್ಟಗೊಳಿಸಬೇಡಿ” ಎಂದು ಅರ್ಜಿದಾರರ ಪರ ವಕೀಲರಿಗೆ ನೇರವಾಗಿ ಸೂಚಿಸಿತು.
ವೀಡಿಯೊ ಸಾಕ್ಷ್ಯ ವೀಕ್ಷಣೆಗೆ ಕೋರ್ಟ್ ನಿರಾಕರಣೆ
ವಿಚಾರಣೆ ವೇಳೆ ಅರ್ಜಿದಾರರ ವಕೀಲ ನರೇಂದ್ರ ಮಿಶ್ರಾ ಅವರು ಪೊಲೀಸರ ದೌರ್ಜನ್ಯವನ್ನು ಸಾಬೀತುಪಡಿಸಲು ವೀಡಿಯೊ ದಾಖಲೆಗಳಿವೆ ಎಂದು ಪೀಠಕ್ಕೆ ತಿಳಿಸಲು ಪ್ರಯತ್ನಿಸಿದರು. ಆದರೆ, “ನಮಗೆ ಈ ರೀತಿಯ ವೀಡಿಯೊಗಳನ್ನು ವೀಕ್ಷಿಸುವ ಆಸಕ್ತಿಯೂ ಇಲ್ಲ, ಸಮಯವೂ ಇಲ್ಲ” ಎಂದು ಹೇಳಿದ ಸಿಜೆಐ, ಪ್ರಕರಣದಲ್ಲಿ ವಿನಾಕಾರಣ ಸಮಯ ವ್ಯರ್ಥ ಮಾಡದಂತೆ ತಿಳಿಸಿದರು.
ತುರ್ತು ವಿಚಾರಣೆ ಕೋರಿಕೆಗೆ ‘ನೋ’
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಇನ್ನೂ ಸ್ಥಳದಲ್ಲೇ ಇದ್ದು, ಮುಂದಿನ ದಿನ ವಿಚಾರಣೆಗೆ ಪಟ್ಟಿ ಮಾಡುವಂತೆ ವಕೀಲರು ಮಾಡಿದ ಮನವಿಯನ್ನೂ ಕೋರ್ಟ್ ತಳ್ಳಿಹಾಕಿತು.
ಹೈಕೋರ್ಟ್ನಲ್ಲೂ ಇದೇ ರೀತಿಯ ಪ್ರತಿಕ್ರಿಯೆ
ಸುಪ್ರೀಂ ಕೋರ್ಟ್ನ ನಿರ್ಧಾರಕ್ಕೂ ಮುನ್ನವೇ ದೆಹಲಿ ಹೈಕೋರ್ಟ್ ಕೂಡ ಇದೇ ರೀತಿಯ ಮನವಿಯನ್ನು ರದ್ದುಗೊಳಿಸಿತ್ತು. ರಾಜಕೀಯ ಮೂಲದ ಪ್ರತಿಭಟನೆಗಳು ಹಾಗೂ ಆಡಳಿತಾತ್ಮಕ ವಿಷಯಗಳೊಳಗೆ ನ್ಯಾಯಾಲಯವನ್ನು ಎಳೆತರುವುದು ಸೂಕ್ತವಲ್ಲ ಎಂದು ಹೈಕೋರ್ಟ್ ಖಾರವಾಗಿ ಅಭಿಪ್ರಾಯಪಟ್ಟಿತ್ತು.



