ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಕಳೆದ ಆರು ದಿನಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆಯು ಇಂದಿನಿಂದ (ಜುಲೈ 25) ಮತ್ತೆ ಪುನರಾರಂಭಗೊಂಡಿದೆ. ಹವಾಮಾನ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದ್ದಂತೆ ಭಕ್ತರ ಕಾಯುವಿಕೆ ಕೊನೆಗೊಂಡಿದ್ದು, ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್ನಿಂದ ಸುಮಾರು 6,000 ಯಾತ್ರಿಕರ ಹೊಸ ಬ್ಯಾಚ್ ಹಿಮಾಲಯದ ಪವಿತ್ರ ಗುಹೆಯತ್ತ ಪ್ರಯಾಣ ಬೆಳೆಸಿದೆ.
ಬಿಗಿ ಭದ್ರತೆಯಲ್ಲಿ ಸಾಗಿದ ಭಕ್ತರ ದಂಡು:
ಪ್ರತಿಭಟನೆಗಳು ಅಥವಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭದ್ರತಾ ಪಡೆಗಳು ತೀವ್ರ ಕಟ್ಟೆಚ್ಚರ ವಹಿಸಿವೆ. ಸಿಆರ್ಪಿಎಫ್ (CRPF) ಮತ್ತು ಸ್ಥಳೀಯ ಪೊಲೀಸರ ಬಿಗಿ ಭದ್ರತೆಯ ನಡುವೆ ಮುಂಜಾನೆ ಯಾತ್ರಿಕರನ್ನು ಬಾಲ್ತಾಲ್ ಮತ್ತು ಪಹಲ್ಗಾಮ್ ಮಾರ್ಗಗಳ ಬೇಸ್ ಕ್ಯಾಂಪ್ಗಳತ್ತ ಕಳುಹಿಸಿಕೊಡಲಾಯಿತು. ಭಕ್ತರು ‘ಬಂ ಬಂ ಭೋಲೆ’ ಘೋಷಣೆಗಳನ್ನು ಕೂಗುತ್ತಾ ಪವಿತ್ರ ಯಾತ್ರೆಯನ್ನು ಮುಂದುವರಿಸಿದ್ದಾರೆ.
ಇದನ್ನೂ ಓದಿ:
ಯಾತ್ರೆ ಸ್ಥಗಿತಕ್ಕೆ ಕಾರಣವೇನು?
ಕಳೆದ ಕೆಲವು ದಿನಗಳಿಂದ ಅಮರನಾಥ ಯಾತ್ರೆಯ ಮಾರ್ಗಗಳಲ್ಲಿ ಭಾರಿ ಮಳೆ ಮತ್ತು ಭೂಕುಸಿತ ಸಂಭವಿಸಿತ್ತು. ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಕಣಿವೆ ರಾಜ್ಯದ ಆಡಳಿತವು ಯಾತ್ರೆಯನ್ನು 6 ದಿನಗಳ ಕಾಲ ಸ್ಥಗಿತಗೊಳಿಸಿತ್ತು. ರಸ್ತೆಗಳನ್ನು ಸರಿಪಡಿಸಿ, ಹವಾಮಾನ ಇಲಾಖೆಯಿಂದ ಹಸಿರು ನಿಶಾನೆ ಸಿಕ್ಕ ಬಳಿಕ ಈಗ ಮತ್ತೆ ಯಾತ್ರೆಗೆ ಅವಕಾಶ ಕಲ್ಪಿಸಲಾಗಿದೆ. ನೊಂದಾಯಿತ ಭಕ್ತರು ಹವಾಮಾನದ ಮುನ್ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯಾಣಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.



