ಹೊಸದಿಗಂತ ವರದಿ ಯಾದಗಿರಿ:
ನಗರದ ನಿವಾಸಿಯೊಬ್ಬರ ಜಾಗವನ್ನು ಸ್ವಾಧಿನಪಡಿಕೊಂಡು ಪರಿಹಾರದ ಹಣ ನೀಡದ ನಗರಸಭೆ ಕಚೇರಿಯಲ್ಲಿನ ವಿವಿಧ ವಸ್ತುಗಳು ಜಪ್ತಿ ಮಾಡುವಂತೆಯೇ ಇಲ್ಲಿನ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯವು ವಾರಂಟ್ ಹೊರಡಿಸಿದ ಹಿನ್ನಲ್ಲೆಯಲ್ಲಿ ಮಂಗಳವಾರ ಲಾರಿ ಸಮೇತ ಆಗಮಿಸಿದ ನ್ಯಾಯಾಲಯದ ಸಿಬ್ಬಂದಿ ಕಂಪ್ಯೂಟರ್, ಸಿಸಿಟಿವಿ, ಕ್ಯಾಮರಾ,ಟೇಬಲ್ ಕುರ್ಚಿಗಳು ಸೇರಿದಂತೆಯೇ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿಕೊಂಡು ಹೋಗಿದ್ದಾರೆ.
ಇಲ್ಲಿನ ನಿವಾಸಿಯಾದ ಸರಸ್ವತಿ ನಾರಾಯಣರಾವ ಅವರಿಗೆ ಸೇರಿದ ಜಾಗವನ್ನು 40 ವರ್ಷಗಳ ಹಿಂದೆಯೇ ನಗರಸಭೆಯು ತನ್ನದೆಂದು ಸ್ವಾಧೀನ ಪಡಿಸಿಕೊಂಡಿತ್ತು. ಆ ಬಳಿಕ ಪರಿಹಾರವಾಗಿ ಒಂದಿಷ್ಟು ಹಣವನ್ನು ನೀಡಿ, ಬಾಕಿ ಹಣ, ಪರಿಹಾರ ಕೋರಿ ಸರಸ್ವತಿ ಅವರು ಕೋರ್ಟ್ ಮೊರೆ ಹೋಗಿದ್ದರು.
ಇದನ್ನೂ ಓದಿ:
ಅರ್ಜಿದಾರರ ಮನವಿಯನ್ನು ಪುರಸ್ಕರಿಸಿ, 2.12 ಕೋಟಿ ರೂ. ಪರಿಹಾರ ಸರಸ್ಕೃತಿ ಅವರಿಗೆ ನೀಡುವಂತೆ ನ್ಯಾಯಾಲಯ ನಗರಸಭೆಗೆ ಆದೇಶ ಮಾಡಿತ್ತು. ಒಂದು ವೇಳೆ ಹಣ ಕೊಡದಿದ್ದರೆ ಕಚೇರಿಯ ಸಾಮಗ್ರಿಗಳನ್ನು ಜಪ್ತಿ ಮಾಡುವಂತೆಯೂ ವಾರಂಟ್ ಹೊರಡಿಸಿತ್ತು.
ಈ ಹಿನ್ನಲ್ಲೆಯಲ್ಲಿ ಸೋಮವಾರ ಲಾರಿ ಸಮೇತ ಜಪ್ತಿಗೆ ಬಂದಿದ್ದ ಕೋರ್ಟ್ ಸಿಬ್ಬಂದಿಗೆ ಮನವಿ ಮಾಡಿದ ಪೌರಾಯುಕ್ತ ಉಮೇಶ ಚವ್ಹಾಣ ಅವರು, ಎಸ್ ಐಆರ್ ಕೆಲಸ ನಡೆದಿದೆ. ದಾಖಲೆಗಳು ಕಂಪ್ಯೂಟರ್ ಗಳಲ್ಲಿ ಇವೆ. ಸಮಯ ನೀಡಿ ಎಂದಾಗ ಮಾತುಕತೆ ಅಪೂರ್ಣಗೊಂಡ ಹಿನ್ನಲೆಯಲ್ಲಿ ವಾಪಸ್ ತೆರಳಿದ್ದ ಸಿಬ್ಬಂದಿ ಮತ್ತೇ ಮಂಗಳವಾರ ಬೆಳಗ್ಗೆ ಬಂದು ಸಾಮಾನುಗಳು ಜಪ್ತಿ ಮಾಡಿಕೊಂಡು ಹೋಗಿದ್ದಾರೆ.



