ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದ ಪ್ರಸಿದ್ಧ ದೇವಾಲಯಗಳಲ್ಲಿ ಲಭ್ಯವಿರುವ ಭಾರಿ ಪ್ರಮಾಣದ ನಿಧಿಯನ್ನು ಬಳಸಿಕೊಂಡು ‘ಎ’ ಮತ್ತು ‘ಬಿ’ ಶ್ರೇಣಿಯ ದೇವಸ್ಥಾನಗಳ ಹೆಸರಿನಲ್ಲೇ ಹೊಸ ಭೂಮಿ ಖರೀದಿಸಲು ಸರ್ಕಾರ ಯೋಜನೆ ರೂಪಿಸಿದೆ. ಈ ಆಸ್ತಿಗಳು ಶಾಶ್ವತವಾಗಿ ದೇವಾಲಯಗಳ ಹೆಸರಲ್ಲೇ ಉಳಿಯಲಿದ್ದು, ಇದರಿಂದ ಭವಿಷ್ಯದಲ್ಲಿ ಭಕ್ತಾದಿಗಳಿಗೆ ಅಗತ್ಯ ಮೂಲಸೌಕರ್ಯ ಒದಗಿಸಲು ಹಾಗೂ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ದೊಡ್ಡ ಮಟ್ಟದ ನೆರವಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಕಾಣಿಕೆ ಹಣ ದುರುಪಯೋಗ ತಡೆಗೆ ಸಿಸಿಟಿವಿ ಕಡ್ಡಾಯ
ವಿಧಾನಸೌಧದಲ್ಲಿ ನಡೆದ ರಾಜ್ಯ ಧಾರ್ಮಿಕ ಪರಿಷತ್ತಿನ ಪ್ರಮುಖ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಭಕ್ತರು ನೀಡುವ ಹರಕೆ ಹಾಗೂ ಕಾಣಿಕೆ ಹಣ ದುರುಪಯೋಗವಾಗದಂತೆ ತಡೆಯಲು ಸಿಎಂ ಸೂಚನೆಯಂತೆ ಎಲ್ಲಾ ಹುಂಡಿಗಳ ಮೇಲೆ ಸಿಸಿಟಿವಿ ಕಣ್ಣಿಡಲಾಗುವುದು ಎಂದರು. ಆಗಸ್ಟ್ ಕೊನೆಯ ವೇಳೆಗೆ ಈ ಕಾರ್ಯ ಪೂರ್ಣಗೊಳ್ಳಬೇಕಿದ್ದು, ಅಧಿಕಾರಿಗಳು ಇದನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕೆಂದು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು.
ನೈರ್ಮಲ್ಯ ಮತ್ತು ಪಾವಿತ್ರ್ಯತೆ ಕಾಪಾಡಲು ಖಡಕ್ ಸೂಚನೆ
ರಾಜ್ಯದ ಹಲವು ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಮೂಲಸೌಕರ್ಯಗಳ ತೀವ್ರ ಕೊರತೆ ಇರುವುದಕ್ಕೆ ಡಿಸಿಎಂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕ್ಷೇತ್ರಗಳ ಪ್ರಸ್ತುತ ಸ್ಥಿತಿ ಕಂಡು ಬೇಸರ ವ್ಯಕ್ತಪಡಿಸಿದ ಅವರು, ಪ್ರತಿಯೊಬ್ಬರೂ ಜವಾಬ್ದಾರಿಯಿಂದ ಕೆಲಸ ಮಾಡಿ ದೇವಾಲಯಗಳ ಪಾವಿತ್ರ್ಯತೆ ಮತ್ತು ಶುಚಿತ್ವವನ್ನು ಕಡ್ಡಾಯವಾಗಿ ಕಾಪಾಡಿಕೊಳ್ಳಬೇಕು ಎಂದು ಎಚ್ಚರಿಸಿದರು.



