ಹೊಸದಿಗಂತ ವರದಿ ಯಾದಗಿರಿ:
ಯಾದಗಿರಿ ತಾಲೂಕಿನ ಕಡೆ ಚೂರು ಬಾಡಿಯಾಲ ಕೈಗಾರಿಕಾ ಪ್ರದೇಶದಲ್ಲಿನ ರಾಸಾಯನಿಕ ಕಾರ್ಖಾನೆಯಲ್ಲಿ ವಿಷಾನೀಲ ಸೋರಿಕೆಯಾಗಿ ಮೂರು ಜನ ಕಾರ್ಮಿಕರು ಉಸಿರುಗಟ್ಟಿ ದಾರುಣವಾಗಿ ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಕಾರ್ಖಾನೆಯಲ್ಲಿ ಇದ್ದಕ್ಕಿದ್ದಂತೆ ವಿಷಾನೀಲ ಸೋರಿಕೆಯಾದ ಕಾರಣ ಕಾರ್ಯನಿರತರಾಗಿದ್ದ ಮೂರು ಜನ ಕಾರ್ಮಿಕರು ಉಸಿರು ಚಲ್ಲಿದ್ದಾರೆ. ಮೃತರು ತೆಲಂಗಾಣ ಮೂಲದವರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಮತ್ತೋರ್ವ ಕಾರ್ಮಿಕನ ಪರಸ್ಥಿತಿ ಚಿಂತಾಜನಕವಾಗಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಕಡೆಚೂರು ಕೈಗಾರಿಕಾ ಪ್ರದೇಶದಲ್ಲಿ ಇಂಥ ಘಟನೆಗಳು ಮೇಲಿಂದ ಮೇಲೆ ಮರುಕಳಿಸುತ್ತಿದ್ದು, ಖಾಸಗಿ ಕಾರ್ಖಾನೆಗಳು ಕಾರ್ಮಿಕರ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತಾಳಿವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ಥಳಕ್ಕೆ ಯಾದಗಿರಿ ಡಿವೈಎಸ್ಪಿ ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ. ಸೈದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



