ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಸರಗೋಡು ಜಿಲ್ಲೆಯ ಉಪ್ಪಳ ಶಿವಾಜಿನಗರದಲ್ಲಿ ಕಡಲ್ಕೊರೆತ ತೀವ್ರಗೊಂಡಿದ್ದು, ಈಗಾಗಲೇ ಇಲ್ಲಿನ ಮನೆಯೊಂದು ಸಮುದ್ರ ಪಾಲಾದ ಬೆನ್ನಲ್ಲೇ, ಪಕ್ಕದ ಮಂಗಲ್ಪಾಡಿ ಗ್ರಾಮ ಪಂಚಾಯಿತಿಯ 16ನೇ ವಾರ್ಡ್ನ ಮುಟ್ಟಂ ಬೇರಿಕೆ ಪ್ರದೇಶದಲ್ಲಿ ಸಮುದ್ರದ ರಕ್ಕಸ ಅಲೆಗಳು ರಸ್ತೆಯನ್ನು ನುಂಗಲಾರಂಭಿಸಿವೆ.
ಕಣ್ಣೆದುರಲ್ಲೇ ಉಂಟಾಗುತ್ತಿರುವ ದುರಂತ ಕಂಡು ಸ್ಥಳೀಯ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ಈ ಭಾಗದಲ್ಲಿ ಕಳೆದ ಎರಡು ದಿನಗಳಿಂದ ಸಮುದ್ರದ ಅಬ್ಬರ ಹೆಚ್ಚಾಗಿದ್ದು, ಅಲೆಗಳು ರಸ್ತೆಯನ್ನು ವೇಗವಾಗಿ ಕೊರೆಯುತ್ತಿವೆ. ರಸ್ತೆ ಸಂಪೂರ್ಣವಾಗಿ ಸಮುದ್ರ ಪಾಲಾದರೆ ಈ ಭಾಗದಲ್ಲಿರುವ ಹಲವು ಮನೆಗಳಿಗೂ ಗಂಭೀರ ಅಪಾಯ ಎದುರಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇದನ್ನೂ ಓದಿ:
ಕೆಲದಿನಗಳ ಹಿಂದಷ್ಟೇ ಉಪ್ಪಳದ ಶಾರದಾನಗರದಲ್ಲಿ ಸಮುದ್ರದ ಅಬ್ಬರಕ್ಕೆ ಮನೆ ಸಂಪೂರ್ಣ ಕುಸಿದು ಸಮುದ್ರ ಪಾಲಾಗಿತ್ತು. ಅಲ್ಲದೆ ಇಲ್ಲಿನ ಹಲವು ಮನೆಗಳು ಅಪಾಯದ ಅಂಚಿನಲ್ಲಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನು ಸಂಬಂಧಿಕರ ಮನೆಗಳಿಗೆ ಸ್ಥಳಾಂತರಿಸಲಾಗಿದೆ.
ಕಡಲ್ಕೊರೆತದಿಂದ ಸಂಕಷ್ಟಕ್ಕೀಡಾಗಿರುವ ಕುಟುಂಬಗಳಿಗೆ ತಕ್ಷಣ ಪರಿಹಾರ ಒದಗಿಸುವುದರ ಜೊತೆಗೆ ಕರಾವಳಿ ಸಂರಕ್ಷಣೆಗೆ ಶಾಶ್ವತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.



