August 8, 2026
Saturday, August 8, 2026
spot_img

ಬೆಂಗಳೂರಿನ ಮನೆಯೊಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆ: ಒಂದೂವರೆ ವರ್ಷದ ಹಿಂದೆ ಮೃತಪಟ್ಟಿರುವ ಶಂಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಂಗಳೂರಿನ ಹಾವನೂರು ಬಡಾವಣೆಯಲ್ಲಿರುವ ಮನೆಯೊಂದರಲ್ಲಿ ಮಹಿಳೆಯ ಅಸ್ಥಿಪಂಜರ ಪತ್ತೆಯಾಗಿದೆ. ಈ ಮನೆಯಲ್ಲಿ ವಾಸವಿದ್ದ ಒಂಟಿ ಮಹಿಳೆಯ ಅಸ್ಥಿಪಂಜರ ಇದಾಗಿದ್ದು, ಒಂದೂವರೆ ವರ್ಷದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ಬೆಂಗಳೂರು ಉತ್ತರ ತಾಲೂಕಿನ ಹಾವನೂರಿನಲ್ಲಿ ಏಕಾಂಗಿಯಾಗಿ ಮಹಿಳೆಯೊಬ್ಬರು ಮನೆಯಲ್ಲಿ ವಾಸಿಸುತ್ತಿದ್ದರು. ಇವರನ್ನು ದಾಕ್ಷಾಯಿಣಿ ಎಂದು ಸ್ಥಳೀಯರು ಗುರುತಿಸಿದ್ದಾರೆ. ದಾಕ್ಷಾಯಿಣಿ ಒಂದೂವರೆ ವರ್ಷದ ಹಿಂದೆಯೇ ಮೃತಪಟ್ಟಿದ್ದು, ಇದೀಗ ಅವರ ಅಸ್ಥಿಪಂಜರ ಮಾತ್ರ ಉಳಿದುಕೊಂಡಿದೆ. ಹತ್ತು ವರ್ಷದ ಹಿಂದೆ ದಾಕ್ಷಾಯಿಣಿ ಅವರ ಪತಿ ಉಮೇಶ್ ಮೃತಪಟ್ಟಿದ್ದು, ಕೆಲ ವರ್ಷಗಳ ಹಿಂದೆ ಅವರ ಮಗನೂ ಮೃತಪಟ್ಟಿದ್ದಾರೆ ತದನಂತರ ದಾಕ್ಷಾಯಿಣಿ ಒಬ್ಬರೇ ವಾಸವಿದ್ದರು.

ವಿಷಯ ಗೊತ್ತಾಗಿದ್ದು ಹೇಗೆ?

ಒಂದೂವರೆ ವರ್ಷದಿಂದ ತೆಗೆಯದ ಮನೆಯ ಬಾಗಿಲು ನಿನ್ನೆ ಸಂಜೆ ತೆಗೆದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಮನೆಯಲ್ಲಿ ಯಾರೂ ವಾಸವಿಲ್ಲ ಕಳ್ಳರು ಮನೆಗೆ ಎಂಟ್ರಿ ನೀಡಿರಬಹುದು ಎಂದು ತಿಳಿದುಕೊಂಡು ನೆರೆಹೊರೆಯವರು ಪೊಲೀಸರಿಗೆ ಕರೆ ಮಾಡಿದ್ದಾರೆ.

ಬಾತ್‌ರೂಮ್‌ನಲ್ಲಿದ್ದ ಅಸ್ಥಿಪಂಜರ

ಪೊಲೀಸರು ಸ್ಥಳಕ್ಕೆ ಆಗಮಿಸಿ ಒಳಕ್ಕೆ ಬಂದಿದ್ದಾರೆ. ಮನೆಯ ಎಲ್ಲ ಕೋಣೆಗಳನ್ನು ಶೋಧಿಸಿದ್ದಾರೆ. ಆದರೆ ಏನೂ ಕಾಣಿಸಿಲ್ಲ. ಮನೆ ಪಾಳುಬಿದ್ದಂತೆ ಕಾಣಿಸಿದೆ. ತದನಂತರ ಕಡೆಯ ಬಾತ್‌ರೂಮ್‌ನ ಬಾಗಿಲು ತೆಗೆದಾಗ ಅಸ್ಥಿಪಂಜರವೊಂದು ಕಾಣಿಸಿದೆ.

ನೂರಾರು ಅನುಮಾನ, ಎಫ್‌ಎಸ್‌ಎಲ್‌ಗೆ ರವಾನೆ

ಒಂದೂವರೆ ವರ್ಷಗಳ ಸಮಯ ದಾಕ್ಷಾಯಿಣಿ ಕಾಣಿಸಲಿಲ್ಲ ಎಂದು ಯಾರೂ ಯಾಕೆ ಮನೆಯನ್ನು ಹುಡುಕಿಕೊಂಡು ಬಂದಿಲ್ಲ? ಇದು ಕೊಲೆಯಾ ಅಥವಾ ಆಕಸ್ಮಿಕ ಸಾವಾ ಎನ್ನುವ ಬಗ್ಗೆ ತನಿಖೆ ನಡೆಯುತ್ತಿದೆ. ಅನೇಕರು ಸ್ನಾನಗೃಹದಲ್ಲಿ ಕಾಲು ಜಾರಿ ಬಿದ್ದು ತಲೆಗೆ ಪೆಟ್ಟಾಗಿ ಮೃತಪಡುತ್ತಾರೆ. ಇದು ಆ ರೀತಿ ಆಗಿರಬಹುದಾ ಅಥವಾ ಯಾರಾದರೂ ಚಿನ್ನ ಹಣಕ್ಕಾಗಿ, ದ್ವೇಷಕ್ಕಾಗಿ ಕೊಂದಿದ್ದಾರಾ ತಿಳಿದುಬಂದಿಲ್ಲ. ಈ ಬಗ್ಗೆ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !