ಹೊಸದಿಗಂತ ವರದಿ ದಾವಣಗೆರೆ:
ನೂತನ ಸಚಿವ ಕೆ.ಎಸ್.ಬಸವಂತಪ್ಪ ಸ್ವಾಗತ ಸಂಭ್ರಮದಲ್ಲಿ ಭಾಗಿಯಾಗಲು ಬಂದಿದ್ದ ರೈತನೊಬ್ಬ ತೆಂಗಿನಕಾಯಿ ಮಾರಿ ಸಂಪಾದಿಸಿದ್ದ 1 ಲಕ್ಷ ರೂ. ಹಣವನ್ನು ಕಳ್ಳರು ಎಗರಿಸಿರುವ ಘಟನೆ ತಾಲೂಕಿನ ಗಡಿಭಾಗದ ನೀರ್ಥಡಿ ಕ್ರಾಸ್ ಬಳಿ ಶನಿವಾರ ನಡೆದಿದೆ.
ನೀರ್ಥಡಿ ಗ್ರಾಮದ ಸಂತೋಷ್ ಬೆಳ್ಳಂಬೆಳಗ್ಗೆ ದಾವಣಗೆರೆ ಮಾರುಕಟ್ಟೆಯಲ್ಲಿ ತೆಂಗಿನಕಾಯಿ ಮಾರಾಟ ಮಾಡಿ ಬಂದಿದ್ದ 1 ರೂ. ಲಕ್ಷ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದರು. ಸಚಿವರ ಸ್ವಾಗತಕ್ಕೆ ಜನಸಾಗರವೇ ಸೇರಿದ್ದರಿಂದ ಸಂತೋಷ್ ಕೂಡ ಉತ್ಸಾಹದಿಂದ ಜನರ ನಡುವೆ ಸೇರಿಕೊಂಡು ಸಚಿವ ಕೆ.ಎಸ್.ಬಸವಂತಪ್ಪ ಅವರನ್ನು ಭೇಟಿಯಾಗಿ ಕೈಕುಲುಕಿ ಅಭಿನಂದಿಸಿದರು. ಜನಜಂಗುಳಿಯನ್ನೇ ಬಂಡವಾಳ ಮಾಡಿಕೊಂಡ ಕಳ್ಳರು ರೈತನ ಜೇಬಿಗೆ ಕತ್ತರಿ ಹಾಕಿ ಹಣವನ್ನು ಎಗರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ:
ನಂತರ ಈ ವಿಚಾರ ಸಂತೋಷ್ ಗಮನಕ್ಕೆ ಬಂದಿದ್ದು, ಹಣ ಕಳೆದುಕೊಂಡ ರೈತ ಕಣ್ಣೀರಿಡುತ್ತಾ ತನ್ನ ಅಳಲು ತೋಡಿಕೊಂಡರು. ರೈತನ ಬೆವರಿನ ಹಣವನ್ನು ಗುರಿಯಾಗಿಸಿಕೊಂಡ ಕಳ್ಳರ ಕೃತ್ಯಕ್ಕೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದ್ದು, ಘಟನೆ ಕುರಿತು ಪೊಲೀಸರು ತನಿಖೆ ನಡೆಸಿ ರೈತನಿಗೆ ನ್ಯಾಯ ಒದಗಿಸಬೇಕು ಎಂಬ ಒತ್ತಾಯ ಕೇಳಿಬಂದಿದೆ.



