ಹೊಸದಿಗಂತ ಡಿಜಿಟಲ್ ಡೆಸ್ಕ್:
ತೆಲಂಗಾಣ ಕಾಂಗ್ರೆಸ್ನಲ್ಲಿ ತೀವ್ರ ಬಿರುಕು ಕಾಣಿಸಿಕೊಂಡಿದ್ದು, ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಶಾಸಕ ಕೋಮಟಿರೆಡ್ಡಿ ರಾಜಗೋಪಾಲ್ ರೆಡ್ಡಿ ತಮ್ಮದೇ ಸರ್ಕಾರದ ವಿರುದ್ಧ ಬಹಿರಂಗವಾಗಿ ಬಂಡಾಯ ಎದ್ದಿದ್ದಾರೆ. ಹೈದರಾಬಾದ್ನ ರವೀಂದ್ರ ಭಾರತಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ತೆಲಂಗಾಣದಲ್ಲಿ ಭ್ರಷ್ಟಾಚಾರ ಮತ್ತು ಅಧಿಕಾರದ ದುರುಪಯೋಗವನ್ನು ಮೆಟ್ಟಿ ನಿಲ್ಲಲು ಶೀಘ್ರದಲ್ಲೇ ಹೊಸ ರಾಜಕೀಯ ಶಕ್ತಿ ಹೊರಹೊಮ್ಮಲಿದೆ ಎಂದು ಘೋಷಿಸಿದ್ದಾರೆ.
ಪ್ರಾಮಾಣಿಕ ಜನರು, ಯುವಕರು ಮತ್ತು ಸಾರ್ವಜನಿಕ ಚಳವಳಿಗಳಲ್ಲಿ ಭಾಗವಹಿಸಿದವರು ಶಾಸನಸಭೆಯನ್ನು ಪ್ರವೇಶಿಸಲಿದ್ದಾರೆ ಎಂದ ಅವರು, ನಾವು ಅಸೆಂಬ್ಲಿ ಪ್ರವೇಶಿಸಿ ತಮಿಳುನಾಡು ಮಾದರಿಯಲ್ಲಿ ತೆಲಂಗಾಣ ರಾಜಕಾರಣವನ್ನು ಸಂಪೂರ್ಣವಾಗಿ ಬದಲಾಯಿಸುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ನಮ್ಮ ತಾಳ್ಮೆಯನ್ನು ದೌರ್ಬಲ್ಯ ಅಂದುಕೊಳ್ಳಬೇಡಿ
ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರ ತೀವ್ರ ವಿಮರ್ಶಕರಾಗಿರುವ ಮತ್ತು ಸಚಿವ ಸ್ಥಾನದ ನಿರೀಕ್ಷೆಯಲ್ಲಿರುವ ರಾಜಗೋಪಾಲ್ ರೆಡ್ಡಿ, ತಮ್ಮ ಮೌನವನ್ನು ಯಾರೂ ಅಸಹಾಯಕತೆ ಎಂದು ಭಾವಿಸಬಾರದು ಎಂದಿದ್ದಾರೆ. “ನೀವು ಲೂಟಿ ಮಾಡಿದ ನಗದು ಹಣದ ಮೂಟೆಗಳೊಂದಿಗೆ ಬರಬಹುದು. ಆದರೆ ಅಭಿವೃದ್ಧಿಯ ಹೆಸರಿನಲ್ಲಿ ಸಾವಿರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆಯುತ್ತಿರುವವರ ವಿರುದ್ಧ ನಾವು ಹೋರಾಡುತ್ತೇವೆ. ನಮ್ಮ ತಾಳ್ಮೆ ಮತ್ತು ಸಹನೆಯನ್ನು ದೌರ್ಬಲ್ಯ ಎಂದು ತಪ್ಪಾಗಿ ತಿಳಿಯಬೇಡಿ” ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:
ಸರ್ಕಾರದ ವಿರುದ್ಧ ಆಕ್ರೋಶ
ರೇವಂತ್ ರೆಡ್ಡಿ ಸರ್ಕಾರವು ಬಡ ಕುಟುಂಬಗಳಿಗೆ ನೀಡುವ 5 ಲಕ್ಷ ರೂ. ವಸತಿ ನೆರವು ಯೋಜನೆಗೆ ವಿಧಿಸಿರುವ ಕಠಿಣ ನಿಯಮಗಳನ್ನು ಶಾಸಕರು ಕಟುವಾಗಿ ಟೀಕಿಸಿದರು. “ಬಡ ಫಲಾನುಭವಿಗಳಿಗೆ ಹಣ ನೀಡಲು ನೂರಾರು ನಿಯಮಗಳನ್ನು ಹೇರಿ ವ್ಯವಸ್ಥೆಯನ್ನು ಸಂಕೀರ್ಣಗೊಳಿಸಲಾಗಿದೆ. ಆದರೆ ಮೇಲ್ಮಟ್ಟದಲ್ಲಿ ದೊಡ್ಡ ಮೊತ್ತದ ಹಣದ ಲೂಟಿ ನಡೆಯುತ್ತಿದೆ. ಸರ್ಕಾರ ಬಡವರಿಗೆ ತೊಂದರೆ ಕೊಡುವುದನ್ನು ಬಿಟ್ಟು, ಕಲ್ಯಾಣ ಯೋಜನೆಗಳು ಅರ್ಹರಿಗೆ ತಲುಪುವಂತೆ ನೋಡಿಕೊಳ್ಳಬೇಕು” ಎಂದು ಆಗ್ರಹಿಸಿದರು.
ವಿದ್ಯಾರ್ಥಿಗಳು, ನಿರುದ್ಯೋಗಿಗಳು, ರೈತರು ಮತ್ತು ಬಡ ಮಹಿಳೆಯರಿಗಾಗಿ ಅಗತ್ಯ ಬಿದ್ದರೆ ನಾವು ಭ್ರಷ್ಟಾಚಾರದ ವಿರುದ್ಧ ದೊಡ್ಡ ಯುದ್ಧವನ್ನೇ ಸಾರುತ್ತೇವೆ. ನಾವು ಯಾವುದಕ್ಕೂ ಹೆದರುವುದಿಲ್ಲ, ಹಿಂದೆ ಸರಿಯುವುದೂ ಇಲ್ಲ ಎಂದು ರಾಜಗೋಪಾಲ್ ರೆಡ್ಡಿ ತಮ್ಮದೇ ಸರ್ಕಾರಕ್ಕೆ ಸವಾಲು ಹಾಕಿದ್ದಾರೆ.



