ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಭಿವೃದ್ಧಿಯ ಹೆಸರಿನಲ್ಲಿ ಉದ್ಯಾನವನಗಳ 5% ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸುವ ಸಲುವಾಗಿ ಸರ್ಕಾರ ಹೊರಡಿಸಿರುವ ಹೊಸ ನಿರ್ಧಾರದ ಕುರಿತು ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಉದ್ಯಾನವನಗಳ 5% ಜಾಗ ಬಳಕೆಗೆ ಕೈಹಾಕಿರುವ ಸರ್ಕಾರದ ವಿವಾದಾತ್ಮಕ ತಿದ್ದುಪಡಿ ವಿರುದ್ಧ ಸಸ್ಯಕಾಶಿ ಲಾಲ್ ಬಾಗ್ನಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಹೊಸ ನೀತಿಯ ವಿರುದ್ಧ ಪ್ರತಿಭಟನೆ ನಡೆಸಲು ಹಲವಾರು ಮಂದಿ ಈ ಲಾಲ್ ಬಾಗ್ನಲ್ಲಿ ಜಮಾಯಿಸಿದ್ದರು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ‘5% ಅಲ್ಲ 1 ಇಂಚು ಜಾಗ ಬಿಟ್ಟುಕೊಡಲ್ಲ’ ಎಂದು ಪ್ರತಿಭಟನಾಕಾರರು ಕಿಡಿಕಾರಿದರು.
ಗಣ್ಯರ ಸಾಥ್
ಈ ಪ್ರತಿಭಟನೆಗೆ ಐಟಿ ಉದ್ಯೋಗಿಗಳು, ಶಾಸಕರು, ಹಿರಿಯ ನಟ ನಟಿಯರು ಸೇರಿದಂತೆ ಹಲವು ಗಣ್ಯರಿಂದ ಸಾಥ್ ದೊರೆಯಿತು. ‘ಬೇಕೇ ಬೇಕು ಲಾಲ್ ಬಾಗ್ ಬೇಕು’ ಅಂತ ಘೋಷಣೆ ಕೂಗುತ್ತಾ ಲಾಲ್ ಬಾಗ್ ಪಶ್ಚಿಮ ದ್ವಾರದಿಂದ ಜನರಿಗೆ ಜಾಗೃತಿ ಮೂಡಿಸುವ ಜಾಗೃತಿ ವಾಕ್ ಆರಂಭಗೊಂಡು ಪೂರ್ವ ದ್ವಾರದವರೆಗೂ ಪ್ರತಿಭಟನಾಕಾರರು ಸಾಗಿದರು.
ಇದನ್ನೂ ಓದಿ:
ಮೈಸೂರಿನಲ್ಲೂ ಹೋರಾಟ
ಉದ್ಯಾನವನಗಳ 5% ಜಾಗ ಬಳಕೆಯ ಕುರಿತು ಮೈಸೂರಿನಲ್ಲೂ ಪ್ರತಿಭಟನೆ ನಡೆಯಿತು. ಮಾಜಿ ಸಂಸದ ಪ್ರತಾಪ್ ಸಿಂಹ ನೇತೃತ್ವದಲ್ಲಿ ಪಡುವಾರಹಳ್ಳಿಯ ಚೆಲುವಾಂಬ ಪಾರ್ಕ್ನಲ್ಲಿ ಹೋರಾಟ ನಡೆಸಲಾಯಿತು. ಇಲ್ಲಿಯೂ ಸಹ ಪ್ರತಿಭಟನಾಕಾರರು ‘ಪಾರ್ಕ್ನ ಒಂದು ಇಂಚು ಜಾಗ ಕೂಡ ಬಿಟ್ಟು ಕೊಡುವುದಿಲ್ಲ’ ಎಂದು ಆಕ್ರೋಶ ಹೊರಹಾಕಿದರು.
ಒಟ್ಟಾರೆ, ಅಭಿವೃದ್ಧಿ ಕಾರ್ಯಗಳಿಗಾಗಿ ಉದ್ಯಾನವನಗಳ ಜಾಗ ಬಳಸುವ ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿರುವ ನಾಗರಿಕರು, ಪರಿಸರ ಯಾವುದೇ ಕಾರಣಕ್ಕೂ ಹಾನಿಗೊಳಗಾಗಬಾರದು ಎಂದು ಆಗ್ರಹಿಸಿದ್ದಾರೆ.



