ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಮೂರು ದಶಕಗಳಿಂದ ಬಾಲಿವುಡ್ನಲ್ಲಿ ಪ್ರೀತಿ, ಪ್ರೇಮ, ಕುಟುಂಬ ಮತ್ತು ಅದ್ದೂರಿ ಸಿನಿಮಾಗಳನ್ನೇ ಕೊಟ್ಟು ಪ್ರೇಕ್ಷಕರನ್ನ ರಂಜಿಸಿರೋ ಕರಣ್ ಜೋಹರ್, ಈಗ ಸಂಪೂರ್ಣವಾಗಿ ಬೇರೆನೇ ದಾರಿಯಲ್ಲಿ ಹೆಜ್ಜೆ ಇಡೋಕೆ ರೆಡಿಯಾಗಿದ್ದಾರೆ. ಕರಣ್ ಜೋಹರ್ ಧರ್ಮ ಪ್ರೊಡಕ್ಷನ್ಸ್ ಬ್ಯಾನರ್ನಲ್ಲಿ ಈ ಬಾರಿ ಒಂದು ಬಿಗ್ ಹಿಸ್ಟಾರಿಕಲ್-ಡಿವೋಷನಲ್ ಸಿನಿಮಾ ಮಾಡಲು ಭರ್ಜರಿ ಪ್ಲಾನ್ ಮಾಡಿಕೊಂಡಿದ್ದಾರೆ. ಅದುವೇ ಭಾರತೀಯ ಪುರಾಣಗಳಲ್ಲೇ ಅತ್ಯಂತ ಪವಿತ್ರ ಮತ್ತು ದೊಡ್ಡ ಪ್ರೇಮಕಥೆ ಎನಿಸಿಕೊಂಡಿರೋ ‘ರಾಧಾ ಕೃಷ್ಣ’ ಕಥೆ.
ಕರಣ್ ಜೋಹರ್ಗೆ ರಾಧಾ-ಕೃಷ್ಣರ ಪ್ರೇಮಕಾವ್ಯವನ್ನು ಬೆಳ್ಳಿಪರದೆ ಮೇಲೆ ತರಬೇಕು ಎಂದು ತುಂಬಾ ದಿನಗಳಿಂದ ಆಸೆ ಇತ್ತಂತೆ. ಕೊನೆಗೂ ಅವರ ಕನಸಿಗೆ ತಕ್ಕಂತೆ ಒಂದು ಅದ್ಭುತವಾದ ಸ್ಕ್ರಿಪ್ಟ್ ಸಿಕ್ಕಿದ್ದು, ಈಗ ಸಿನಿಮಾ ಕೆಲಸಗಳು ಫುಲ್ ಜೋರಾಗಿ ನಡೀತಂತಿವೆ. ಕೃಷ್ಣನ ಜನನದಿಂದ ಹಿಡಿದು ದುಷ್ಟ ಕಂಸನ ವಧೆಯವರೆಗಿನ ರೋಮಾಂಚನಕಾರಿ ಘಟನೆಗಳು ಈ ಸಿನಿಮಾದಲ್ಲಿರಲಿವೆ. ಆದರೆ, ಇಡೀ ಸಿನಿಮಾದ ಅಸಲಿ ಜೀವಾಳ ಮಾತ್ರ ರಾಧಾ ಮತ್ತು ಕೃಷ್ಣರ ನಡುವಿನ ದಿವ್ಯ ಪ್ರೇಮ, ಎಮೋಷನ್ಸ್, ಡ್ರಾಮಾ ಮತ್ತು ಕಣ್ಣೀರು ತರಿಸೋ ಆ ಅಗಲಿಕೆಯ ಕಥೆಯೇ ಆಗಿರಲಿದೆ.
ಈ ಗ್ರ್ಯಾಂಡ್ ಪ್ರಾಜೆಕ್ಟ್ಗೆ ಆಕ್ಷನ್ ಕಟ್ ಹೇಳುತ್ತಿರೋದು ನಮ್ಮ ಕನ್ನಡದ ಹೆಮ್ಮೆಯ ನಿರ್ದೇಶಕ ಸಚಿನ್ ರವಿ. ಹೌದು, ರಕ್ಷಿತ್ ಶೆಟ್ಟಿ ಜೊತೆ ಸೇರಿ ‘ಅವನೇ ಶ್ರೀಮನ್ನಾರಾಯಣ’ ಎಂಬ ಸೂಪರ್ ಹಿಟ್ ಫ್ಯಾಂಟಸಿ ಸಿನಿಮಾ ಕೊಟ್ಟಿದ್ದ ಸಚಿನ್ ರವಿ, ಈಗ ಈ ದೊಡ್ಡ ಪ್ರಾಜೆಕ್ಟ್ ಮುನ್ನಡೆಸುತ್ತಿದ್ದಾರೆ. ‘ಕಿರಿಕ್ ಪಾರ್ಟಿ’, ‘ಉಳಿದವರು ಕಂಡಂತೆ’ ಯಂತಹ ಹಿಟ್ ಸಿನಿಮಾಗಳಿಗೆ ಎಡಿಟರ್ ಆಗಿ ಕೆಲಸ ಮಾಡಿ ಸೈ ಎನಿಸಿಕೊಂಡಿರೋ ಸಚಿನ್ ರವಿ ಕೈಗೆ ಈ ಪ್ರಾಜೆಕ್ಟ್ ಸಿಕ್ಕಿರೋದು ಸ್ಯಾಂಡಲ್ವುಡ್ಗೂ ಹೆಮ್ಮೆಯ ವಿಷಯ.
ಸದ್ಯಕ್ಕೆ ಸಿನಿಮಾದಲ್ಲಿ ಯಾರೆಲ್ಲಾ ನಟಿಸ್ತಾರೆ, ರಾಧೆ ಮತ್ತು ಕೃಷ್ಣನ ಪಾತ್ರವನ್ನು ಯಾರು ಮಾಡ್ತಾರೆ ಅನ್ನೋದನ್ನ ಚಿತ್ರತಂಡ ಸಸ್ಪೆನ್ಸ್ ಆಗಿ ಇಟ್ಟಿದೆ. ಆದರೆ, ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಅದ್ದೂರಿಯಾಗಿ ಮೂಡಿಬರಲಿರೋ ಈ ಸಿನಿಮಾ, ಬಾಲಿವುಡ್ನಲ್ಲೊಂದು ಹೊಸ ಇತಿಹಾಸ ಸೃಷ್ಟಿಸೋದ್ರಲ್ಲಿ ಅನುಮಾನವಿಲ್ಲ.



