ಹೊಸದಿಗಂತ ವರದಿ ಬಳ್ಳಾರಿ:
ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಬರ ನಿರ್ವಹಣೆಯಲ್ಲಿ ಸರ್ಕಾರದ ನಿರ್ಲಕ್ಷ್ಯ, ವಾಲ್ಮೀಕಿ ನಿಗಮಕ್ಕೆ 187 ಕೋಟಿ ರೂ. ವಾಪಸ್ಸಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನೇತೃತ್ವದಲ್ಲಿ ರಾಯಚೂರು ಜಿಲ್ಲೆಯ ಲಿಂಗಸೂರು ನಿಂದ ಪ್ರಾರಂಭವಾದ ಬಳ್ಳಾರಿ ಚಲೋ ಬೃಹತ್ ಪಾದಯಾತ್ರೆ ಬುಧವಾರ ಸಂಜೆ ಗಣಿನಾಡು ಬಳ್ಳಾರಿ ನಗರ ಪ್ರವೇಶ ವಾಗುತ್ತಿದ್ದಂತೆ ಬಿ.ವೈ.ವಿಜಯೇಂದ್ರ ಅವರು ಮಂಡಿಯೂರಿ ನಮಸ್ಕರಿಸಿ ಗಮನಸೆಳೆದರು.

ಈ ವೇಳೆ ನೆರೆದ ಸಾವಿರಾರು ಕಾರ್ಯಕರ್ತರು, ಮುಖಂಡರಿಂದ ಗಾಯಘೋಷಗಳು ಮೊಳಗಿದವು. ಬಳ್ಳಾರಿ ಚಲೋ ಪಾದಯಾತ್ರೆ ಇಂದೊಂದು ನನ್ನ ರಾಜಕೀಯ ಜೀವನದಲ್ಲಿ ಮರೆಯಲಾಗದ ಹೋರಾಟ, ಪ್ರತಿಭಟನೆ, ಇದನ್ನು ನಾನೆಂದೂ ಮರೆಯುವ ಮಾತೇ ಇಲ್ಲ, ಕಳೆದ 9 ದಿನಗಳಿಂದ ದಾರಿಯುದ್ದಕ್ಕೂ ಜನರು ತೋರಿಸಿರುವ ಪ್ರೀತಿ, ಅಭಿಮಾನ, ಆಶೀರ್ವಾದವನ್ನು ಎಂದು ಮರೆಯಲಾರೆ, ಪ್ರಮುಖ ರೂವಾರಿಗಳಾದ ನಮ್ಮ ಕಾರ್ಯಕರ್ತರು, ಮುಖಂಡರು, ನಾಯಕರಿಗೆ ಅತ್ಯಂತ ಪ್ರೀತಿಯ ಅಭಿನಂದನೆಗಳನ್ನು ಸಲ್ಲಿಸುವೆ. ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ಇದು ಅಂತ್ಯವಲ್ಲ, ಇದು ಆರಂಭ, ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರಲಿದೆ ಎಂದು ವಿಜಯೇಂದ್ರ ಅವರು ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜುಗೌಡ, ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಇತರರಿದ್ದರು.
ಇದನ್ನೂ ಓದಿ:
ದೊಡ್ಡ ಸಂಖ್ಯೆಯಲ್ಲಿ ಬನ್ನಿ: ವಿಜಯೇಂದ್ರ ಮನವಿ
ಸೆ.10 ರಂದು ಸಂಜೆ 4 ಗಂಟೆಗೆ ಬಳ್ಳಾರಿ ಚಲೋ ಪಾದಯಾತ್ರೆಯ ಸಮಾರೋಪ ಕಾರ್ಯಕ್ರಮ ನಡೆಯಲಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಸಂಖ್ಯೆಯಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಇಂದು ಅಭಿಮಾನಿಗಳು ಬರಲಿದ್ದಾರೆ. ಎಲ್ಲ ಕಾರ್ಯಕರ್ತರು, ತಾಯಂದಿರು, ಅಣ್ಣ-ತಮ್ಮಂದಿರು, ಅಕ್ಕ-ತಂಗಿಯರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಮನವಿ ಮಾಡಿದ್ದಾರೆ.



