ಹೊಸದಿಗಂತ ವರದಿ ವಿಜಯಪುರ:
ಹೆತ್ತ ಮಗನನ್ನೇ ತಂದೆ ಕೊಡಲಿಯಿಂದ ಹೊಡೆದು ಬರ್ಬರ ಹತ್ಯೆ ಮಾಡಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹಂಗರಗಿ ಗ್ರಾಮದ ತೋಟದ ವಸ್ತಿಯಲ್ಲಿ ನಡೆದಿದೆ.
ಇಲ್ಲಿನ ಮುತ್ತು ಉರ್ಫ್ ಬಾಬು ನಿಂಗನಗೌಡ ಬಿರಾದಾರ (27) ಮೃತ ಯುವಕ.
ಮುತ್ತು ಉರ್ಫ್ ಬಾಬು ಬಿರಾದಾರ ಈತನು ಇಲ್ಲಿನ ಗಾಂಧಿ ನಗರದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದು, ಆಗಾಗ ತಂದೆ- ತಾಯಿ ಜೊತೆಗೆ ಖರ್ಚಿನ ಹಣಕ್ಕಾಗಿ ಜಗಳವಾಡುತ್ತಿದ್ದ ಎನ್ನಲಾಗಿದೆ.
ಈಚೆಗೆ ಹಂಗರಗಿಗೆ ಬಂದಿದ್ದ ಮುತ್ತು, ತೋಟವನ್ನು ಮಾರಾಟ ಮಾಡಲು ಸಹಿ ಮಾಡುವಂತೆ ಪೋಷಕರಿಗೆ ಒತ್ತಾಯಿಸಿದ್ದಾನೆ. ಹಣ ನೀಡದಿದ್ದರೆ ಅವರನ್ನು ಕೊನೆಗಾಣಿಸುವುದಾಗಿ ಬೆದರಿಸಿ ರಾತ್ರಿ 11 ಗಂಟೆಯವರೆಗೆ ಜಗಳವಾಡಿದ್ದಾನೆ.
ಇದನ್ನೂ ಓದಿ:
ಬಳಿಕ ಶೆಡ್ನಲ್ಲಿದ್ದ ಮಂಚದ ಮೇಲೆ ಮಲಗಿದ್ದಾನೆ. ಬೆಳಗ್ಗಿನ ಜಾವ ತಂದೆ ನಿಂಗನಗೌಡ ಮುತ್ತುನನ್ನು ಕೊಡಲಿಯಿಂದ ಕುತ್ತಿಗೆ, ಹಣೆಗೆ ಹೊಡೆದು, ಬರ್ಬರ ಹತ್ಯೆ ಮಾಡಿದ್ದಾನೆ ಎಂದು ಮೃತ ಯುವಕನ ತಾಯಿ ಬೋರಮ್ಮ ಬಿರಾದಾರ ದೂರಿನಲ್ಲಿ ತಿಳಿಸಿದ್ದಾರೆ.
ಈ ಸಂಬಂಧ ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



