ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದ ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ಸಂಸ್ಥೆಗಳಲ್ಲಿ ಹೊಸದಾಗಿ ನೇಮಕಗೊಂಡ 51 ಸಾವಿರಕ್ಕೂ ಹೆಚ್ಚು ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ನಡೆದ 20ನೇ ರೋಜ್ಗಾರ್ ಮೇಳದಲ್ಲಿ ನೇಮಕಾತಿ ಪತ್ರ ವಿತರಿಸಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಕಾರ್ಯಕ್ರಮದಲ್ಲಿ ಹೊಸ ಉದ್ಯೋಗಿಗಳಿಗೆ ಶುಭಕೋರಿದ ಪ್ರಧಾನಿ, ಸರ್ಕಾರಿ ಸೇವೆ ಆರಂಭಿಸುತ್ತಿರುವ ಯುವಕರಿಗೆ ಇದು ಹೊಸ ಅಧ್ಯಾಯದ ಆರಂಭವಾಗಿದೆ ಎಂದರು.
ಯುವಶಕ್ತಿಯೇ ಭಾರತ ನಿರ್ಮಾಣದ ಪ್ರಮುಖ ಶಕ್ತಿ
ಯುವಶಕ್ತಿಯೇ 2047ರ ವಿಕಸಿತ ಭಾರತ ನಿರ್ಮಾಣದ ಪ್ರಮುಖ ಶಕ್ತಿಯಾಗಲಿದೆ. ಹೊಸದಾಗಿ ನೇಮಕಗೊಂಡವರು ತಮ್ಮ ಜ್ಞಾನ, ಕೌಶಲ್ಯ ಮತ್ತು ಜವಾಬ್ದಾರಿಯನ್ನು ಜನಸೇವೆಗೆ ಬಳಸಬೇಕು. ಆಡಳಿತ ವ್ಯವಸ್ಥೆಯಲ್ಲಿ ಎದುರಾಗುವ ಸಮಸ್ಯೆಗಳನ್ನು ಸರಳಗೊಳಿಸುವ ಮೂಲಕ ನಾಗರಿಕರಿಗೆ ಉತ್ತಮ ಸೇವೆ ನೀಡಬೇಕು ಎಂದು ಕರೆ ನೀಡಿದರು.
ಯುವಕರ ಕೌಶಲ್ಯಾಭಿವೃದ್ಧಿಗೂ ಒತ್ತು
ಉದ್ಯೋಗ ಸೃಷ್ಟಿಯ ಜೊತೆಗೆ ಯುವಕರ ಕೌಶಲ್ಯಾಭಿವೃದ್ಧಿಗೂ ಒತ್ತು ನೀಡಲಾಗುತ್ತಿದೆ ಎಂದು ಅವರು ಹೇಳಿದರು. ರಾಷ್ಟ್ರೀಯ ಶಿಕ್ಷಣ ನೀತಿ, ಸ್ಕಿಲ್ ಇಂಡಿಯಾ, ಪ್ರಧಾನಮಂತ್ರಿ ಕೌಶಲ ವಿಕಾಸ್ ಯೋಜನೆ ಹಾಗೂ ಅಪ್ರೆಂಟಿಸ್ಶಿಪ್ ಕಾರ್ಯಕ್ರಮಗಳ ಮೂಲಕ ಭವಿಷ್ಯದ ಉದ್ಯೋಗ ಮಾರುಕಟ್ಟೆಗೆ ಅಗತ್ಯವಾದ ಕೌಶಲ್ಯ ರೂಪಿಸುವ ಪ್ರಯತ್ನ ನಡೆಯುತ್ತಿದೆ ಎಂದು ವಿವರಿಸಿದರು. ಭಾರತದ ಸ್ಟಾರ್ಟ್ಅಪ್ ವಲಯದ ಬೆಳವಣಿಗೆಯನ್ನೂ ಪ್ರಸ್ತಾಪಿಸಿದ ಮೋದಿ, ದೇಶವು ವಿಶ್ವದ ಮೂರನೇ ಅತಿದೊಡ್ಡ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾಗಿದ್ದು, ಅದರ ವಿಸ್ತರಣೆ ಮಹಾನಗರಗಳಿಗೆ ಮಾತ್ರ ಸೀಮಿತವಾಗಿಲ್ಲ ಎಂದರು.
ಇದನ್ನೂ ಓದಿ:
12.75 ಲಕ್ಷ ಯುವಕರಿಗೆ ನೇಮಕಾತಿ
ರೋಜ್ಗಾರ್ ಮೇಳದ 20ನೇ ಆವೃತ್ತಿಯೊಂದಿಗೆ ವಿವಿಧ ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಒಟ್ಟು ಸುಮಾರು 12.75 ಲಕ್ಷ ಯುವಕರಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಹೊಸ ಸರ್ಕಾರಿ ನೌಕರರು ನಿರಂತರವಾಗಿ ತಮ್ಮ ಜ್ಞಾನ ಮತ್ತು ಕೌಶಲ್ಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಮೋದಿ ಸಲಹೆ ನೀಡಿದರು. ತಂತ್ರಜ್ಞಾನ ಬದಲಾಗುತ್ತಿರುವ ಸಂದರ್ಭದಲ್ಲಿ ಹೊಸ ಕೌಶಲ್ಯಗಳನ್ನು ಕಲಿಯುವುದು ಅತ್ಯಗತ್ಯ. ಮಿಷನ್ ಕರ್ಮಯೋಗಿ ಹಾಗೂ iGOT ವೇದಿಕೆಗಳ ಮೂಲಕ ನಿರಂತರ ತರಬೇತಿಗೆ ಅವಕಾಶವಿದೆ ಎಂದರು.
ಪ್ರಾಮಾಣಿಕತೆ, ದಕ್ಷತೆಯಿಂದ ಕೆಲಸ ಮಾಡಿ
ಪಿಂಚಣಿ, ವಿದ್ಯಾರ್ಥಿವೇತನ, ರೈತರ ಸಬ್ಸಿಡಿ ಸೇರಿದಂತೆ ಸರ್ಕಾರಿ ಸೇವೆಗಳ ನೇರ ಪರಿಣಾಮ ಜನರ ಬದುಕಿನ ಮೇಲೆ ಬೀರುತ್ತದೆ. ಹೀಗಾಗಿ ಅಧಿಕಾರಿಗಳು ಪ್ರಾಮಾಣಿಕತೆ, ದಕ್ಷತೆ, ಸಹಾನುಭೂತಿ ಮತ್ತು ಸೂಕ್ಷ್ಮತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಪ್ರಧಾನಿ ಹೇಳಿದರು.
‘ನಾಗರಿಕ ದೇವೋ ಭವ’ ಎಂಬ ತತ್ವವನ್ನು ಅಳವಡಿಸಿಕೊಂಡು ಜನರ ಬದುಕನ್ನು ಸುಲಭಗೊಳಿಸುವ ಕೆಲಸ ಮಾಡಬೇಕು. ಜನರಿಗೆ ಉತ್ತಮ ಸೇವೆ ನೀಡುವುದೇ ಸರ್ಕಾರಿ ನೌಕರರ ಯಶಸ್ಸಿನ ನಿಜವಾದ ಮಾನದಂಡವಾಗಬೇಕು ಎಂದು ಮೋದಿ ಕರೆ ನೀಡಿದರು.



