ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಕನಸವಾಡಿ ಗ್ರಾಮದ ದೇವಸ್ಥಾನದ ಜಾಗದಲ್ಲಿದ್ದ 5ನೇ ಶತಮಾನದ ಗಂಗ ರಾಜವಂಶದ ಶಿಲಾ ಶಾಸನವೊಂದು ನಾಪತ್ತೆಯಾಗಿರುವ ಬಗ್ಗೆ ಇತಿಹಾಸಕಾರರು, ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.
ಗಂಗ ಅರಸರು ನೀಡಿದ ದೇಣಿಗೆಯ ಬಗ್ಗೆ ಹೇಳುವ ಶಿಲಾ ಶಾಸನ ನಾಪತ್ತೆಯಾಗಿದೆ ಎಂದು ಕರ್ನಾಟಕ ಇತಿಹಾಸ ಅಕಾಡೆಮಿಯ ಸದಸ್ಯರು, ಶಿಲಾ ಶಾಸನ ಮತ್ತು ವೀರಗಲ್ಲುಗಳನ್ನು ಅಧ್ಯಯನ ಮಾಡುವ ಸಂಶೋಧಕರು ಹೇಳಿದ್ದಾರೆ. ಶಿಲಾ ಶಾಸನವನ್ನು ನಾಶಪಡಿಸಿ, ದೇವಾಲಯಕ್ಕೆ ಹೊಂದಿಕೊಂಡಂತೆ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಬಳಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಕುರಿತು ಮಾತನಾಡಿದ ಸಂಶೋಧಕ ಹಾಗೂ ಅಕಾಡೆಮಿ ಸದಸ್ಯ ಮಧುಸೂಧನ್ ಕೆ.ಆರ್. ಅಧ್ಯಯನದ ಸಮಯದಲ್ಲಿ ಗ್ರಾಮದಲ್ಲಿ ಕಲ್ಲಿನ ಶಾಸನ ಇರುವುದನ್ನು ತಿಳಿದುಬಂದಿತ್ತು. ನಂತರ ಗ್ರಾಮಸ್ಥರ ಅದರ ಮಹತ್ವವನ್ನು ತಿಳಿಸಿ, ಅದನ್ನು ರಕ್ಷಿಸಬೇಕಾದ ಅಗತ್ಯತೆಯನ್ನು ಹೇಳಿದ್ದೆ. ಅದನ್ನು ಮ್ಯೂಸಿಯಂಗೆ ಸ್ಥಳಾಂತರಿಸುವಂತೆಯೂ ಸೂಚಿಸಿದ್ದೆ. ಗ್ರಾಮಸ್ಥರು ಕೂಡಾ ಅದನ್ನು ರಕ್ಷಿಸುವುದಾಗಿ ಭರವಸೆ ನೀಡಿದ್ದರು. ಮೂರು ದಿನಗಳ ಹಿಂದೆ ಹೆಚ್ಚಿನ ಅಧ್ಯಯನಕ್ಕಾಗಿ ಮತ್ತೊಮ್ಮೆ ಶಾಸನದ ಛಾಯಾಚಿತ್ರ ತೆಗೆಯಲು ಸ್ಥಳಕ್ಕೆ ಹೋದಾಗ ಅದು ಕಾಣೆಯಾಗಿತ್ತು ತಿಳಿಸಿದರು.