ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆ ಮಾಲೀಕರು ತಿಗಣೆ ಮದ್ದು ಸಿಂಪಡಿಸಿದ್ದರಿಂದ 6 ವರ್ಷದ ಮಗು ಸಾವಿಗೀಡಾದ ಘಟನೆ ಬೆಂಗಳೂರಿನ ವಸಂತನಗರದಲ್ಲಿ ನಡೆದಿದೆ.
ಇಲ್ಲಿನ ಅಡ್ಡರಸ್ತೆ ಬಳಿ ಇರುವ ಶಿವಪ್ರಸಾದ್ ಎಂಬವರ ಮಾಲೀಕತ್ವದ ಮನೆಯಲ್ಲಿ ಈ ಪ್ರಕರಣ ನಡೆದಿದೆ.ಬಾಡಿಗೆದಾರ ವಿನೋದ್ ನಾಯರ್ ಎಂಬವರ ಪುತ್ರಿ 6 ವರ್ಷದ ಪುತ್ರಿ ಅಹನಾ ಉಸಿರುಗಟ್ಟಿ ಸಾವಿಗೀಡಾಗಿದ್ದಳು.
ಪಾಲಕರು ಕೂಡ ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅಹನಾ ಸಾವಿಗೆ ಮನೆ ಮಾಲೀಕರು ತಿಗಣೆ ಮದ್ದು ಸಿಂಪಡಿಸಿದ್ದೇ ಕಾರಣ ಎಂಬ ಆರೋಪ ಬಂದಿತ್ತು.
ಈ ಮಧ್ಯೆ ಮನೆ ಮಾಲೀಕರನ್ನು ವಶಕ್ಕೆ ಪಡೆದಿರುವ ಪೊಲೀಸರು, ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಕೇರಳ ಮೂಲದ ವಿನೋದ್ ನಾಯರ್ 8 ವರ್ಷಗಳಿಂದ ಬೆಂಗಳೂರಿನಲ್ಲಿದ್ದು, ವಸಂತನಗರದ ನಮ್ಮ ಮನೆಯಲ್ಲಿ ಬಾಡಿಗೆಗಿದ್ದರು ಎಂದಿರುವ ಮನೆ ಮಾಲೀಕ ಘಟನೆಗೆ ಸಂಬಂಧಿಸಿದಂತೆ ಮತ್ತಷ್ಟು ಮಾಹಿತಿ ಹಂಚಿಕೊಂಡಿದ್ದಾರೆ.
ಮನೆಯಲ್ಲಿ ತಿಗಣೆ ಜಾಸ್ತಿ ಆಗಿದೆ ಅಂತ ಅವರೇ ಹೇಳಿದ್ದರು. ಹೀಗಾಗಿ ಔಷಧ ಸಿಂಪಡಿಸಲು ನಾಲ್ಕು ದಿನ ಬೇಕಾಗುತ್ತದೆ ಎಂದಿದ್ದೆ. ತಿಗಣೆ ಔಷಧ ಹೊಡೆಯುವುದಾಗಿ ಅವರಿಗೆ ಮೂರು ದಿನ ಮುಂಚಿತವಾಗಿ ಹೇಳಿದ್ದೆ, ಹೀಗಾಗಿ ಅವರು ಊರಿಗೆ ಹೋಗಿದ್ದರು. ಅದರಂತೆ ನಾನು ಮನೆಗೆ ಪೆಸ್ಟ್ ಕಂಟ್ರೋಲ್ನವರನ್ನು ಕರೆಸಿ ಔಷಧ ಸಿಂಪಡಿಸಿದ್ದೆ. ನಂತರ ಮನೆಯ ಲಾಕ್ ಮಾಡಿದ್ದು, ಕೀ ಕೂಡ ನನ್ನ ಬಳಿಯೇ ಇತ್ತು.ಹೀಗೆ ಕೇರಳಕ್ಕೆ ಹೋಗಿದ್ದ ಅವರು ನಿನ್ನೆ ನಮಗೆ ತಿಳಿಸದೇ ಬಂದು ಬಿಟ್ಟಿದ್ದರು. ಸ್ಪೇರ್ ಕೀ ಬಳಸಿ ಮನೆಗೆ ಪ್ರವೇಶಿಸಿದ್ದರು. ಇದು ನಮ್ಮ ಗಮನಕ್ಕೆ ಬಂದಿರಲಿಲ್ಲ. ಹೀಗಾಗಿ ಮಗು ಸಾವಿಗೆ ಪಾಲಕರೇ ಕಾರಣ. ಮಗು ಸೋಫಾ ಮಲಗಿದ್ದು, ಬಳಿಕ ವಾಂತಿ ಮಾಡಲಾರಂಭಿಸಿತ್ತಂತೆ. ನಂತರ ಆಸ್ಪತ್ರೆಗೆ ಕರೆದೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದೆ ಎಂದು ಮನೆ ಮಾಲೀಕ ವಿಚಾರಣೆ ವೇಳೆ ಪೊಲೀಸರಿಗೆ ತಿಳಿಸಿದ್ದಾರೆ.