ಹೊಸದಿಗಂತ ಡಿಜಿಟಲ್ ಡೆಸ್ಕ್
ರಾಮಾಯಣದಲ್ಲಿ ಭಾರತದಿಂದ ಹೋದ ಕೋತಿ (ಹನುಮಂತ)ಯೊಂದು ಇಡೀ ಲಂಕೆಗೆ ಬೆಂಕಿ ಇಟ್ಟ ಕಥೆ ಕೇಳಿರಬಹುದು.. ಅಂತೆಯೇ ಇದೀಗ ಮತ್ತೆ ಶ್ರೀಲಂಕಾ ಕೋತಿಯಿಂದಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿದೆ.
ತ್ರೇತಾಯುಗದಲ್ಲಿ ಸೀತಾ ಮಾತೆಗಾಗಿ ಲಂಕೆಗೆ ಹೋಗಿದ್ದ ಆಂಜನೇಯನನ್ನು ಕೆಣಕಿದ ರಾವಣನ ಲಂಕೆಯೇ ಸುಟ್ಟು ಭಸ್ಮವಾಯಿತು. ಅದೇ ಲಂಕೆಯಲ್ಲಿ ಇದೀಗ ಆಂಜನೇಯನ ಪ್ರತಿರೂಪ ಎಂದೇ ಹೇಳಲಾಗುವ ವಾನರ ಒಂದು ಬೆಚ್ಚಿ ಬೀಳಿಸುತ್ತಿದೆ. ಇಡೀ ಶ್ರೀಲಂಕಾವನ್ನೇ ಕತ್ತಲಿಗೆ ತಳ್ಳಿದೆ ಒಂದೇ ಒಂದು ಕಪಿ.
ಫೆಬ್ರವರಿ 9ರಂದು ಇಡೀ ಶ್ರೀಲಂಕಾ ಕತ್ತಲಿನಲ್ಲಿ ಇರುವಂತಾಗಿದೆ. ಹೀಗೆ ಒಂದಿಡೀ ದೇಶವನ್ನು ಕತ್ತಲಿಗೆ ದೂಡಿದ್ದು ಒಂದೇ ಒಂದು ಕಪಿ ಅನ್ನೋ ವಿಚಾರವೇ ಇದೀಗ ಬಹುದೊಡ್ಡ ಚರ್ಚೆಯ ವಿಷಯವಾಗಿದೆ.
ಭಾನುವಾರ ಖುಷಿಯಲ್ಲೇ ಇದ್ದ ದ್ವೀಪರಾಷ್ಟ್ರ ಶ್ರೀಲಂಕಾ ಬೆಳಗ್ಗೆ 11.30ಕ್ಕೆ ವಿದ್ಯುತ್ ಸಂಪರ್ಕವೇ ಇಲ್ಲದೇ ಪರದಾಡುವಂತಾಯಿತು. ದಕ್ಷಿಣ ಕೊಲಂಬೋದಲ್ಲಿ ಒಂದೇ ಒಂದು ಕೋತಿ ಮಾಡಿದ ಕಿತಾಪತಿಗೆ ಇಡೀ ದೇಶವೇ ವಿದ್ಯುತ್ ಸಂಪರ್ಕವಿಲ್ಲದೇ ಒದ್ದಾಡುವಂತಾಗಿದೆ.
ಶ್ರೀಲಂಕಾದ ಇಂಧನ ಸಚಿವ ಕುಮಾರ ಜಯಕೋಡಿ ಅದೊಂದು ಕೋತಿ ಮಾಡಿದ ಕಿತಾಪತಿ ಬಗ್ಗೆ ಮಾಹಿತಿ ನೀಡಿದ್ದಾರೆ. ಇಡೀ ದೇಶಕ್ಕೆ ವಿದ್ಯುತ್ ಸರಬರಾಜು ಮಾಡುತ್ತಿದ್ದ ಗ್ರಿಡ್ ಟ್ರಾನ್ಸ್ಫಾರ್ಮರ್ಗೆ ಒಂದು ಕೋತಿ ತಾಕಿತ್ತು. ಇದೇ ಕಾರಣಕ್ಕೆ ವಿದ್ಯುತ್ ಸಂಚಾರ ನಿಲ್ಲುವಂತಾಗಿದೆ. ನಮ್ಮ ಎಂಜಿನಿಯರ್ಗಳು ದುರಸ್ಥಿ ಕೆಲಸ ಮಾಡುತ್ತಿದ್ದು, ಆದಷ್ಟು ಬೇಗ ವಿದ್ಯುತ್ ಸರಬರಾಜು ಮೊದಲಿನಂತೆ ಸಿಗಲಿದೆ ಎಂದು ಖುದ್ದು ಸಚಿವ ಜಯಕೋಡಿ ಹೇಳಿದ್ದಾರೆ.
ದ್ವೀಪ ರಾಷ್ಟ್ರ ಶ್ರೀಲಂಕಾದ ರಾಜಧಾನಿ ಕೊಲಂಬೋದಿಂದ 28 ಕಿ.ಮೀ ದೂರದಲ್ಲಿರೋ ಪಣದುರ ಗ್ರಿಡ್ ಸಬ್ ಸ್ಟೇಷನ್ ಬಳಿ ಇದ್ದ ಟ್ರಾನ್ಸ್ಫಾರ್ಮರ್ ಅನ್ನ ಕೋತಿ ಮುಟ್ಟಿದ್ದರಿಂದಾಗಿಯೇ ಬೆಳಗ್ಗೆ 11.30 ಇಂದ ಸಂಜೆ 5.30ರವರೆಗೂ ವಿದ್ಯುತ್ ವ್ಯತ್ಯಯ ಉಂಟಾಗಿದೆ ಅಂತ ಸಿಲೋನ್ ಎಲೆಕ್ಟ್ರಿಸಿಟಿ ಬೋರ್ಡ್ನ ಚೇರ್ಮನ್ ಡಾ. ತಿಲಕ್ ಸಿಯಾಂಬಲಪಟಿಯಾ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.